ಈ ಜಗತ್ತಿನಲ್ಲಿ ಕನ್ನಡ ಭಾಷೆಯಷ್ಟು ಸಮೃದ್ಧವಾದ ಭಾಷೆ ಬೇರಾವುದೂ ಇಲ್ಲ ಎಂದು ಆದಿಜಾಂಭವ ಸಮಾಜದ ತಾಲೂಕು ಅಧ್ಯಕ್ಷ ನಡಕಲಪುರ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯು ಪ್ರತಿಯೊಬ್ಬ ಕನ್ನಡಿಗರ ಜೀವನದ ಅಸ್ಮಿತೆ. ಕನ್ನಡ ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟ ಶ್ಲಾಘನೀಯ. ಜನರು ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಬೇಕೆಂದರು.
ಇದನ್ನೂ ಓದಿ: ವಿಜೃಂಭಣೆಯಿಂದ ನಡೆದ ಮತ್ತಿತಾಳೇಶ್ವರ ಭವ್ಯ ರಥೋತ್ಸವ
ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುವವರು ಆಟೋ ಚಾಲಕರು. ಅವರು ಕನ್ನಡ ಭಾಷೆಯ ಬಗ್ಗೆ ಬಹಳ ಅಭಿಮಾನ ಬಿತ್ತಿದ್ದಾರೆ. ತಮಗೆ ಬರುವ ಸಣ್ಣ ಹಣದಲ್ಲಿ ಕನ್ನಡ ಭಾಷೆಯ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಕನ್ನಡದ ಕಟ್ಟಾಳುಗಳ ಬೆನ್ನೆಲುಬಾಗಿ ಕನ್ನಡಿಗರು ನಿಲ್ಲಬೇಕು ಎಂದರು. ಇದೇ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಸುನಿಲ್ ಹಾಗೂ ಬಿ.ಜಿ.ಪುರ ಮಂಟೇಲಿಂಗಯ್ಯ ಅವರನ್ನು ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾ ನೂರುಲ್ಲಾ, ಸಿದ್ದರಾಜು, ಪುಟ್ಟಸ್ವಾಮಿ, ಮುಖಂಡರಾದ ಯಮದೂರು ಸಿದ್ದರಾಜು, ಸಂಘಟನೆಯ ನಾಗೇಶ್,ಎಂ.ಎಸ್.ರಮೇಶ್, ಶಿವಾನಂದ್ ಸೇರಿದಂತೆ ಹಲವು ಮುಖಂಡರು, ಕನ್ನಡಾಭಿಮಾನಿಗಳು ಹಾಜರಿದ್ದರು.