ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ವತಿಯಿಂದ ಕೇಂದ್ರ ಸಮಿತಿ ಹಾಗೂ ಮಂಡ್ಯ ಜಿಲ್ಲಾ ಕಸಾಪ ಘಟಕದ ಸಹಯೋಗದೊಂದಿಗೆ ಮಂಡ್ಯ ನಗರದ ರೈತ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ ರವರ ನೇತೃತ್ವದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ನಗರದಲ್ಲಿ ಆಚರಣೆ ಮಾಡುವ ಸಂಬಂಧ ಪೂರ್ವಭಾವಿ ಸಭೆ ಜರುಗಿತು.
ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ ಮಾತನಾಡಿ, ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಮಂಡ್ಯ ನಗರದಲ್ಲಿ ವ್ಯವಸ್ಥಿತವಾಗಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಸಮ್ಮೇಳನವನ್ನು ಆಚರಣೆ ಮಾಡಲು ಈಗಾಗಲೇ ತೀರ್ಮಾನಿಸಿದ್ದು ತಮ್ಮೆಲ್ಲರ ಸಹಾಯ, ಸಹಕಾರ ಒಮ್ಮತದಿಂದ ಆಚರಣೆ ಮಾಡುವುದು ನಮ್ಮ ಉದ್ದೇಶವಾಗಿದ್ದು ಜಿಲ್ಲೆಯ ಹಾಗೂ ಸಮಸ್ತ ಕರ್ನಾಟಕ ರಾಜ್ಯದ ಎಲ್ಲರ ಬೆಂಬಲ ಅಧಿಕಾರಿಗಳು ಜನಪ್ರತಿನಿಧಿಗಳ, ಮುಖ್ಯಮಂತ್ರಿಗಳ ಬೆಂಬಲ ಅತ್ಯಂತ ಅವಶ್ಯಕವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚಾಮಲಾಪುರ ರವಿಕುಮಾರ್ ಅವರು ಬೇಗ ಗುಣಮುಖವಾಗಲೆಂದು ಪ್ರಾರ್ಥಿಸಿದರು.
ಮಂಡ್ಯ ಜಿಲ್ಲಾ ಕಸಾಪ ಜಿಲ್ಲಾ ಉಪಾಧ್ಯಕ್ಷ ವಕೀಲ ಎಂ. ಗುರುಪ್ರಸಾದ್ ಮಾತನಾಡಿ, ಜನವರಿಯಲ್ಲಿ ಸಂಕ್ರಾಂತಿ ಹಬ್ಬ, ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆ ಜರುಗಲಿದ್ದು ಮೇ ತಿಂಗಳು ಲೋಕಸಭೆ ಚುನಾವಣೆ ಜರುಗಲಿದ್ದು ಜೂನ್, ಜುಲೈ ವರ್ಷದ ಮಧ್ಯ ಬೇಸಿಗೆ ಮಳೆಗಾಲ ಇರುವುದರಿಂದ ನವಂಬರ್ 1 ಕನ್ನಡ ರಾಜ್ಯೋತ್ಸವದ ದಿವಸ ಸಮ್ಮೇಳನ ಪ್ರಾರಂಭವಾಗಿ 3 ದಿವಸಗಳ ಕಾಲ ರಾಜ್ಯಮಟ್ಟದ ಸಮ್ಮೇಳನ ಮಂಡ್ಯ ನಗರದಲ್ಲಿ ಜರುಗಿದರೆ ರಾಜ್ಯಾದ್ಯಂತ 31 ಜಿಲ್ಲೆಗಳಿಂದ ಸಾಹಿತ್ಯ ಅಭಿಮಾನಿಗಳು, ಹಿರಿಯರು, ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು ಒಳಗೊಂಡಂತೆ ಕನ್ನಡ ಅಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿ ಸೇರಲು ಅವಕಾಶವಾಗುತ್ತದೆ ಹಾಗೂ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಮ್ಮೇಳನ ಯಶಸ್ವಿಯಾಗಲು 31 ಜಿಲ್ಲೆಗಳಿಗೆ ಭೇಟಿ ನೀಡಿ ಎಲ್ಲರನ್ನು ಆಹ್ವಾನಿಸಬೇಕು, ಕನ್ನಡಾಂಬೆಯ ರಥ ಎಲ್ಲಾ ಜಿಲ್ಲೆ ತಾಲೂಕು ಗ್ರಾಮಗಳನ್ನು ಭೇಟಿ ಮಾಡಿ ಎಲ್ಲರನ್ನೂ ಆಹ್ವಾನಿಸಬೇಕು, ಹೀಗಾಗಿ ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ನಮ್ಮ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಅತ್ಯಂತ ಉತ್ಸುಕರಾಗಿದ್ದು ವಿಜೃಂಭಣೆಯಿಂದ ನಾಡಿನ ಜಿಲ್ಲೆಯ ಜನತೆಯ ಪರವಾಗಿ ಜರುಗಲು ಸಹಕರಿಸುತ್ತಾರೆ ಎಂದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಕೋಶಾಧ್ಯಕ್ಷ ಬಿ. ಎಂ. ಅಪ್ಪಾಜಪ್ಪ ಜಿಲ್ಲಾ ಪದಾಧಿಕಾರಿಗಳಾದ ಧನಂಜಯ್, ರಮೇಶ್, ಕಸಾಪ ಮಂಡ್ಯ ನಗರ ಘಟಕದ ಅಧ್ಯಕ್ಷರಾದ ಸುಜಾತ ಕೃಷ್ಣ, ಮುಖಂಡರಾದ ಅಂಜನಾ ಶ್ರೀಕಾಂತ್, ಶಾರದಾ ರಮೇಶ ರಾಜು, ನಾಗರೇವಕ್ಕ, ರೈತಸಂಘದ ಮುಖಂಡರಾದ ಸುನಂದ ಜಯರಾಮ್, ಗೊರವಾಲೆ ಚಂದ್ರಶೇಖರ್, ರೈತಸಂಘದ ಬೋರಯ್ಯ, ಮಾಜಿ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಧರಣೇಂದ್ರಯ್ಯ, ಜಿ.ಟಿ. ವೀರಪ್ಪ, ಡಾ. ರಾಜಕುಮಾರ್ ಸಂಘದ ರವೀಂದ್ರ ಕುಮಾರ್, ಲೋಕೇಶ್, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹಾದೇವು, ಮಂಗಲ ಲಂಕೇಶ್, ಸ್ವರ್ಣಸಂದ್ರ ಕೃಷ್ಣ, ಗುತ್ತಲು ನವೀನ್ ಕುಮಾರ್, ಬೇಬಿ ಸಂಪತ್ತು, ಎಂ.ಆರ್. ಮಂಜುನಾಥ್, ಸ್ವಾಮಿಗೌಡ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.