ಮೂರನೇ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಎತ್ತಿ ಹಿಡಿಯಲು ಇಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡುತ್ತಿದೆ. ಆದರೆ ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ತಂದುಕೊಟ್ಟ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರನ್ನು ಫೈನಲ್ ಪಂದ್ಯಕ್ಕೆ ಆಹ್ವಾನಿಸಿರಲಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಎಬಿಪಿ ನ್ಯೂಸ್ ಜೊತೆಯಲ್ಲಿ ಮಾತನಾಡಿರುವ ಕಪಿಲ್ ದೇವ್, “ನನ್ನನ್ನು ಫೈನಲ್ ಪಂದ್ಯಕ್ಕೆ ಆಹ್ವಾನಿಸಿರಲಿಲ್ಲ” ಎಂದು ತಿಳಿಸಿದ್ದಾರೆ.
“ನನಗೆ ಆಹ್ವಾನ ಬಂದಿರಲಿಲ್ಲ. ಅವರು ನನ್ನನ್ನು ಕರೆಯಲಿಲ್ಲ. ಹಾಗಾಗಿ ನಾನು ಹೋಗಲಿಲ್ಲ ಅಷ್ಟೇ. 1983ರ ತಂಡ ನನ್ನೊಂದಿಗೆ ಇರಬೇಕೆಂದು ನಾನು ಬಯಸಿದ್ದೆ. ಆದರೆ ಇದು ತುಂಬಾ ದೊಡ್ಡ ಕಾರ್ಯಕ್ರಮ. ತುಂಬಾ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ವೆಸ್ಟ್ ಇಂಡಿಯಾ ತಂಡವನ್ನು ಮಣಿಸಿದ್ದ ಭಾರತ ತಂಡ ಕಪ್ ಎತ್ತಿ ಹಿಡಿದಿತ್ತು. ಲಾರ್ಡ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಂತಿಮವಾಗಿ 183 ರನ್ಗಳನ್ನು ಗಳಿಸಿತ್ತು. ವೆಸ್ಟ್ ಇಂಡೀಸ್ ತಂಡ 43 ರನ್ಗಳ ಅಂತರದಲ್ಲಿ ಸೋಲನ್ನು ಕಂಡಿತ್ತು.