ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜನ್ಮದಿನದ ಅಂಗವಾಗಿ ಮೈಷುಗರ್ ಕಾರ್ಖಾನೆ ಸ್ವಚ್ಛತೆಗೆ ನೀಡಿದ್ದ ಅನುಮತಿ ನಿರಾಕರಿಸಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷ ಮಹಮದ್ ನಲ್ಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ ಮೈಷುಗರ್ ಸ್ವಚ್ಛತೆಗೆ ಅಧ್ಯಕ್ಷ ಮಹಮದ್ ನಲಪಾಡ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಾರ್ಖಾನೆಯ ಮುಂಭಾಗ ತಡೆದು ನಿಲ್ಲಿಸಿದ ಪೋಲಿಸರು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ಕಾರ್ಖಾನೆಗೆ ಬಿಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್, ಕಾರ್ಖಾನೆ ಆಡಳಿತ ಮಂಡಳಿಯೇ ಕಾರ್ಖಾನೆ ಸ್ವಚ್ಛಗೊಳಿಸಲು ಅನುಮತಿ ನೀಡಿದ್ದು ಇಂದು ಏಕಾಏಕಿ ಸ್ವಚ್ಛತೆ ಮಾಡದಂತೆ ತಡೆಯುವ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್, ಅನುಮತಿ ಕೊಟ್ಟು ವಾಪಸ್ ಪಡೆದ ಹಿಂದೆ ಬಿಜೆಪಿ ಕುತಂತ್ರವಿದೆ. ಜೂನ್ ನಲ್ಲಿ ಕಬ್ಬು ಕಟಾವು ಮಾಡುವ ಹಿನ್ನೆಲೆಯಲ್ಲಿ ಕಾರ್ಖಾನೆಯ ಆವರಣ ಸ್ವಚ್ಛತೆ ಇಲ್ಲದ ಕಾರಣ ನಾವು ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸ್ವಚ್ಛತೆಗೆ ಅನುಮತಿ ಪಡೆದು ಬಂದಿದ್ದೆವು. ನಾಲ್ಕು ಜೆಸಿಬಿ, ಟಿಪ್ಪರ್, ಟ್ಯಾಕ್ಟರ್ ಎಲ್ಲವನ್ನು ಸ್ವಚ್ಚತೆಗಾಗಿ ತಂದಿದ್ದೆವು. ಆದರೆ ಪೋಲಿಸರು ತಡೆದಿರುವುದು ಸರಿಯಲ್ಲ ಎಂದರು
10 ಲಕ್ಷ ಖರ್ಚಾದರೂ ಸರಿ ಕಾರ್ಖಾನೆ ಸ್ವಚ್ಛಮಾಡುವುದು ನಮ್ಮ ಗುರಿ. ಆದರೆ ಸರ್ಕಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈಗ ಅನುಮಾನ ಉಂಟಾಗುತ್ತಿದೆ. ಬಹುಶಃ 40ರಷ್ಟು ಕಮಿಷನ್ ಸಿಗುವುದಿಲ್ಲ ಎಂಬ ಕಾರಣದಿಂದ ಅನುಮತಿ ರದ್ದು ಮಾಡಿದ್ದಾರೆ ಅಂತ ನಾವು ರಾಜಕೀಯ ಮಾಡುತ್ತಿಲ್ಲ. ಕಾರ್ಖಾನೆ ಸ್ವಚ್ಛ ಮಾಡಬೇಕು ಎಂಬುದು ನಮ್ಮ ಉದ್ದೇಶ. ಮೈಷುಗರ್ ಕಾರ್ಖಾನೆ ಸ್ವಚ್ಛಗೊಂಡು ರೈತರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಸಂಘರ್ಷವಾದರೂ ಸರಿ ಮಾಡೇ ಮಾಡುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಐಶ್ವರ್ಯ ಮಹದೇವ್,ರಶ್ಮಿ ಶಿಬಕುಮಾರ್ ಚಿದಂಬರ್ ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್,ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್,ರುದ್ರಪ್ಪ ನಗರಸಭಾ ಸದಸ್ಯ ಶ್ರೀಧರ್, ಮೊದಲಾದವರಿದ್ದರು.