ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅಧಿಕ ಬಹುಮಾನ ಪಡೆದಿರುವ ಜೊತೆಗೆ ರಾಷ್ಟ್ರ ಮಟ್ಟದ ಕರಾಟೆ ತೀರ್ಪುಗಾರ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಪರೀಕ್ಷೆಯಲ್ಲಿ ಪಾಂಡವಪುರ ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದ ಎಸ್.ಆರ್. ಸೃಜನ್ ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.
ಗ್ರಾಮೀಣ ಪ್ರದೇಶದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಸೃಜನ್ ಯಶಸ್ಸಿನ ಹಿಂದೆ ಪಾಂಡವಪುರ ಮಾಸ್ಟರ್ ಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯ ತರಬೇತುದಾರ ಎಸ್.ಹೇಮಂತ್ ಹಾಗೂ ಅಂಜಲಿ ಹೇಮಂತ್ ಅವರ ಶ್ರಮವಿದೆ.
ಪಾಂಡವಪುರ ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದ ರಾಜೇಶ್ ಹಾಗೂ ಜ್ಯೋತಿ ದಂಪತಿ ಪುತ್ರ ಎಸ್.ಆರ್.ಸೃಜನ್ ಅವರನ್ನು ಸ್ವಗ್ರಾಮ ಶಂಭೂನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಗ್ರಾಮದ ಯಜಮಾನರು, ಯುವಕರು,ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಪುರಸಭೆ ಸದಸ್ಯ ಬಿ.ವೈ.ಬಾಬು, ಪೊಲೀಸ್ ಪೇದೆ ಸೋಮಶೇಖರ್, ಶಿಕ್ಷಕ ಎಸ್.ಡಿ.ರವಿಕುಮಾರ್, ಕಲಾವಿದ ಮಂಜುನಾಥ್, ವೆಂಕಟೇಶ್, ಕಲಾವಿದ ಮಂಜುನಾಥ್, ಕರಾಟೆ ತರಬೇತುದಾರ ಹೇಮಂತ್ ಸನ್ಮಾನಿಸಲಾಯಿತು.
ಆಂಧ್ರ ಪ್ರದೇಶದಲ್ಲಿ ಇಂಡಿಯನ್ ಕರಾಟೆ ಫೆಡರೇಷನ್ ವತಿಯಿಂದ ಆಯೋಜಿಸಿರುವ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಸೃಜನ್ ಪಾಲ್ಗೊಳ್ಳುತ್ತಿದ್ದು,ಯಶಸ್ಸು ಸಿಗಲಿ ಎಂದು ಗ್ರಾಮಸ್ಥರು ಶುಭಕೋರಿದರು.