ಕೆನಡಾ ಸಂಸತ್ತಿನಲ್ಲಿ ಕನ್ನಡಿಗನ ಕನ್ನಡ ಕಂಪು
ಎಲ್ಲಿಯ ಕೆನಡಾ…ಎಲ್ಲಿಯ ಕರ್ನಾಟಕ…ಎಲ್ಲಿಯ ಕನ್ನಡ…
ಕೆನಡಾದ ಸಂಸತ್ತಿನಲ್ಲಿಂದು ಕನ್ನಡ ಭಾಷೆಯ ಕಂಪು ಪಸರಿಸಿದೆ. ಕರ್ನಾಟಕದ ಹೆಮ್ಮೆಯ ಕನ್ನಡಿಗ ಸಂಸದ ಚಂದ್ರ ಆರ್ಯ ಅವರು, ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೀತಿಯನ್ನು ಕೆನಡಾ ಸಂಸತ್ತಿನಲ್ಲಿ ತೋರಿಸುವ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿ ಸುದ್ದಿಯಾಗಿದ್ದಾರೆ.
ತಾಯಿನುಡಿ ಕನ್ನಡದಲ್ಲಿಯೇ ಕೆನಡಾ ಸಂಸತ್ತಿನಲ್ಲಿ ಮಾತನಾಡಿದ ಚಂದ್ರ ಆರ್ಯ ಅವರ ಕನ್ನಡ ನುಡಿಮುತ್ತುಗಳ ಸಾರಾಂಶ…..
ಮಾನ್ಯ ಸಭಾಪತಿ,
ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತದ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ. ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು…
ಧನ್ಯವಾದಗಳು, ಸಭಾಪತಿ ಎಂದು ತಮ್ಮ ಮಾತು ಮುಗಿಸಿದ್ದಾರೆ.
ಕೆನಡಾದ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಅವರಾಡಿದ ಮಾತುಗಳು ವಿಶ್ವದಲ್ಲಿ ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಿ,ಕನ್ನಡಿಗರಿಗೆ ಗರಿಮೆ ಹೆಚ್ಚಿಸಿದೆ.