ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ, ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮಂಡ್ಯದಲ್ಲಿ ನಡೆಸುತ್ತಿರುವ ನಿರಂತರ ಧರಣಿಯನ್ನು ಮುಂದುವರೆಸಲು ಸಮಿತಿಯು ನಿರ್ಣಯ ಕೈಗೊಂಡಿದೆ.
ಬುಧವಾರ ಸಭೆ ಸೇರಿದ ಸಮಿತಿಯ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರು ನಿಲ್ಲಿಸುವ ಬಗ್ಗೆ ಸ್ವಷ್ಟ ನಿರ್ಧಾರ ಪ್ರಕಟಿಸದಿರುವುದರಿಂದ ಹೋರಾಟ ಮುಂದುವರಿಸುವುದಾಗಿ ನಿರ್ಧಾರಕ್ಕೆ ಬಂದರು.
ಸಮಿತಿಯ ಸುನಂದ ಜಯರಾಂ ಮಾತನಾಡಿ, ತಮಿಳುನಾಡಿಗೆ ಪ್ರತಿನಿತ್ಯ 2600 ಕ್ಯೂಸೆಕ್ ನಂತೆ 15 ದಿನಗಳ ಕಾಲ ನೀರು ಬಿಡುವಂತೆ ಸಮಿತಿ ಶಿಫಾರಸು ಮಾಡಿರುವುದು ಮತ್ತು ಮುಖ್ಯಮಂತ್ರಿ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ನಿಲ್ಲಿಸುವ ಬಗ್ಗೆ ದಿಟ್ಟ ನಿಲುವು ತಾಳದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದರು.
ಹೋರಾಟ ಮುಂದುವರಿಸುವ ಬಗ್ಗೆ ಯಾವುದೇ ಗೊಂದಲ ಇಲ್ಲ, ನಿರಂತರ ಧರಣಿ ಮುಂದುವರೆಯಲಿದೆ, ಸರ್ಕಾರ ಯಾವ ರೀತಿ ಮುಂದುವರೆಯಲಿದೆ ಎಂಬುದು ಅವರಿಗೆ ಬಿಟ್ಟ ವಿಚಾರ. ಕಾನೂನಾತ್ಮಕ ಹೋರಾಟವನ್ನು ಮಾಡಲಿ, ವಿಶೇಷ ಜಂಟಿ ಅಧಿವೇಶನ ಕರೆದು ಚರ್ಚೆ ಮಾಡಲಿ, ಸಂಸದರನ್ನು ಒಳಗೊಂಡಂತೆ ಒಮ್ಮತದ ತೀರ್ಮಾನ ಕೈಗೊಳ್ಳಲಿ, ಒಳ್ಳೆಯದನ್ನು ನಿರೀಕ್ಷೆ ಮಾಡುತ್ತೇವೆ ಆದರೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಸ್ಥಗಿತ ಮಾಡಬೇಕೆಂಬುದು ನಮ್ಮ ಒತ್ತಡವಾಗಿದೆ ಎಂದರು.
ಸಭೆಯಲ್ಲಿ ಶಾಸಕ ಗಣಿಗ ರವಿಕುಮಾರ್, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ.ಬೋರಯ್ಯ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, , ಮಾಜಿ ಶಾಸಕ ಡಾ.ಕೆ.ಅನ್ನದಾನಿ,ಜಿ.ಬಿ.ಶಿವಕುಮಾರ್, ರೈತ ಸಂಘದ ಮುದ್ದೇಗೌಡ, ಹಲ್ಲೇಗೆರೆ ಶಿವರಾಂ, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ದಸಂಸ ಎಂ ವಿ ಕೃಷ್ಣ ಮತ್ತಿತರರು ಹಾಜರಿದ್ದರು.