ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿಯಾಗಿ ಚಂದ್ರು ಕೀಲಾರ (ಚಂದ್ರಶೇಖರ ಕೆ.ಆರ್) ಗುರುವಾರ ನಾಮಪತ್ರ ಸಲ್ಲಿಸಿದರು, ಇಂದು ಮಧ್ಯಾಹ್ನ ಮಂಡ್ಯದ ಡಿ.ಸಿ ಕಚೇರಿಗೆ ಭೇಟಿ ನೀಡಿ ಚುನಾವಣಾ ಅಧಿಕಾರಿ ಡಾ.ಕುಮಾರ್ ಅವರಿಗೆ ತಮ್ಮ ಉಮೇದುವಾರಿಕೆಯನ್ನ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ ಹೆಚ್ ಮಲ್ಲೇಗೌಡ, ಜಿಲ್ಲಾಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಜಿಲ್ಲಾ ಕಾರ್ಯದರ್ಶಿ ನಾಗರಾಜು ಡಿ.ಜಿ ಹಾಗು ಪಕ್ಷದ ಎಲ್ಲಾ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.
ನಾಮಪತ್ರ ಸಲ್ಲಿಸಿದ ನಂತರ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ ಹೆಚ್ ಮಲ್ಲೇಗೌಡ ಮಾತನಾಡಿ, ಕರ್ನಾಟಕದಲ್ಲಿ ಜೆ.ಸಿ.ಬಿ ಪಕ್ಷಗಳಿಗೆ ಪರ್ಯಾಯವಾಗಿ ಇಂದು ಕೆ.ಆರ್.ಎಸ್ ಪಕ್ಷ ರಾಜ್ಯದ 28 ಲೋಕಸಭಾ ಕ್ಷೇತ್ರ ಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಮೂಲಕ ಕರ್ನಾಟಕದ ಒಂದು ದೊಡ್ಡ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಕಳೆದ ಐದು ವರ್ಷದಲ್ಲಿ ನಮ್ಮ ಹೋರಾಟಗಳನ್ನ ಗಮನಿಸಿರುವಂತಹ 5 ಕೋಟಿಗೂ ಹೆಚ್ಚು ಜನರನ್ನ ತಲುಪಿ ಮತಯಾಚನೆಯನ್ನ ಕೆ.ಆರ್.ಎಸ್ ಪಕ್ಷ ಈ ಬಾರಿ ಮಾಡಲಿದೆ, ಹಾಗಾಗಿ ಪ್ರಜ್ಞಾವಂತ ಮತದಾರರು ಒಳ್ಳೆಯ ಪ್ರಾಮಾಣಿಕ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ, ಹಣ, ಹೆಂಡ, ಸೀರೆ ಇತ್ಯಾದಿ ಹೀಗೆ ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ, ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗದ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಭ್ರಷ್ಟಾಚಾರಮುಕ್ತ, ಲಂಚಮುಕ್ತ ಕರ್ನಾಟಕವನ್ನ ನಿರ್ಮಿಸಲಿಕ್ಕೆ ನಾವೆಲ್ಲರೂ ಸಿದ್ಧರಿರಬೇಕೆಂದರು.