ನಾಡಪ್ರಭು ಕೆಂಪೇಗೌಡರು ಸ್ವಾರ್ಥವನ್ನು ಮರೆತು ಜನರಿಗಾಗಿ ಬದುಕಿದ ಗಣ್ಯ ವ್ಯಕ್ತಿ.ಅವರ ಜನ್ಮದಿನವನ್ನು ಊರ ಹಬ್ಬದಂತೆ ಆಚರಿಸಬೇಕೆಂದು ಜಿ.ಪಂ.ಮಾಜಿ ಸದಸ್ಯ ಎ.ಎಸ್. ರಾಜೀವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ 513ನೇ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಕೆಂಪೇಗೌಡರು ಸಾವಿರ ಕೆರೆಗಳನ್ನು ಕಟ್ಟಿ ಬೆಂಗಳೂರನ್ನು ನಿರ್ಮಾಣ ಮಾಡಿದವರು. ಅವರ ಜನ್ಮದಿನವನ್ನು ಇನ್ನೂ ಮುಂದೆ ಪ್ರತಿ ಹಳ್ಳಿಗಳಲ್ಲೂ ಊರ ಹಬ್ಬದಂತೆ ಆಚರಿಸಬೇಕು.ಆ ಮೂಲಕ ಒಕ್ಕಲಿಗರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ನೂರಾರು ಯುವಕರು ಮದ್ದೂರು- ಮಳವಳ್ಳಿಯ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ ಕೆಂಪೇಗೌಡರ ಪರ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಎಎಸ್ಐಗಳಾದ ರಾಜೇಂದ್ರ ಪ್ರಸಾದ್,ಪುಟ್ಟಮಾದು ಮಾಜಿ ತಾ.ಪಂ.ಸದಸ್ಯ ಮೆಣಸಗೆರೆ ಗಿರೀಶ್ ಹಾಗೂ ಕೆಂಪೇಗೌಡ ಸೇನಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು.