ಕರ್ನಾಟಕ-ತಮಿಳುನಾಡು ಮಧ್ಯೆದಲ್ಲಿ ಉಂಟಾಗಿರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು, ಅಲ್ಲದೇ ಅನ್ಯಾಯಕ್ಕೊಳಗಾಗಿರುವ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆಗ್ರಹಿಸಿದರು.
ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾವೇರಿ ನಮ್ಮದು, ನಮ್ಮ ನೀರಿಗಾಗಿ ನಾವು ಹೋರಾಟ ನಡೆಸುತ್ತಿದ್ದೇವೆ, ನಮ್ಮ ನೀರು ನಮ್ಮ ಹಕ್ಕು ಈ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ರಸ್ತೆಗಿಳಿದು ಹೋರಾಟ ಮಾಡಬೇಕು. ರಾಜ್ಯದಲ್ಲಿ 1 ಲಕ್ಷ ಗುತ್ತಿಗೆದಾರರಿದ್ದೀವಿ, ಮುಂದಿನ ಹೋರಾಟದ ಬಗ್ಗೆ ಸಭೆ ಸೇರಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇನ್ನೂ 15 ದಿನಗಳ ನಂತರ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸಿಗುವುದಿಲ್ಲ, ಈಗಲೇ 2-3 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಅಣೆಕಟ್ಟೆಯಲ್ಲಿ ನೀರು ಖಾಲಿಯಾದ ಮೇಲೆ ಎಲ್ಲಿಂದ ನೀರು ಬಿಡುತ್ತಾರೆ ? ಬೆಂಗಳೂರಿನಲ್ಲಿ ತಮಿಳರು, ಮಲೆಯಾಳಿಗಳು ಸೇರಿದಂತೆ 1.50 ಕೋಟಿ ಜನಸಂಖ್ಯೆ ಇದೆ, ಇವರು ಕಾವೇರಿ ನೀರು ಕುಡಿಯುತ್ತಿಲ್ಲವೇ ? ಅವರೆಲ್ಲರೂ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಆಗ್ರಹಿಸಿದರು.
ರೈತರು-ಗುತ್ತಿಗೆದಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೀರಿಲ್ಲದೇ ಗುತ್ತಿಗೆದಾರರು ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ, ಹಾಗಾಗಿ ಕೂಡಲೇ ಎರಡು ರಾಜ್ಯಗಳ ಸಿಎಂಗಳನ್ನು ಕರೆದು ಪ್ರಧಾನಿಯವರು ಮಾತುಕತೆ ನಡೆಸಲಿ ಎಂದು ಒತ್ತಾಯಿಸಿದರು.
ಪ್ರತಿಭಟನಾ ಮೆರವಣಿಗೆ
ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಗುತ್ತಿಗೆದಾರರು ಬುಧವಾರ ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯ ನಗರದ ಲೋಕೋಪಯೋಗಿ ಕಚೇರಿ ಆವರಣದಿಂದ ಮೆರವಣಿಗೆ ಹೊರಟುಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ರಾಜ್ಯ ಸರ್ಕಾರ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಜಿಲ್ಲಾ ರೈತ ಇತರ ಕ್ಷಣ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ತೆರಳಿ ಕಾವೇರಿ ಹೋರಾಟ ಬೆಂಬಲ ಸೂಚಿಸಿದ ಪ್ರತಿಭಟನಾ ನಿರತ ಗುತ್ತಿಗೆದಾರರು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ ವಾಗುತ್ತಿದ್ದು, ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ದೂರಿದರು.
ಈ ಸಂರ್ಭದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾಧ್ಯಕ್ಷ ಯತಿರಾಜ್,ಗುತ್ತಿಗೆದಾರರಾದ ಸಿ.ತ್ಯಾಗರಾಜು, ನಾಗರಾಜು,ಕೃಷ್ಣೇಗೌಡ, ಆರ್.ನಾಗೇಶ್,ಮಾರುತಿ, ಸುನಿಲ್ ಬಾಬು, ರವೀಂದ್ರ, ಕೆ.ಟಿ ಹನುಮಂತು ಮತ್ತಿತರರಿದ್ದರು.