Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗೆ ಬಂದು ಹೋಗುವವರನ್ನು ಪಕ್ಷಕ್ಕೆ ಸೇರಿಸಬೇಡಿ: ಖರ್ಗೆ ಸೂಚನೆ

ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಮರಳಿ ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕರಿಗೆ ಸಲಹೆಯನ್ನು ನೀಡಿದ್ದು, ಪಕ್ಷಕ್ಕೆ ಕರೆತರುವ ನಾಯಕರ ಸಿದ್ಧಾಂತ ಮತ್ತು ಹಿನ್ನೆಲೆಯನ್ನು ಸೂಕ್ತವಾಗಿ ಪರಿಶೀಲಿಸುವಂತೆ ಸೂಚಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ನಾಯಕರಿಗೆ ಈ ಸಂದೇಶವನ್ನು ನೀಡಿದೆ. ಅವರು ಇಂದು ಬಂದು ನಾಳೆ ನಿರ್ಗಮಿಸುವ ಪರಿಸ್ಥಿತಿ ಆಗಬಾರದು ಎಂದು ರಾಜ್ಯ ನಾಯಕರಿಗೆ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಪಕ್ಷ ತೊರೆದು ಕಾಂಗ್ರೆಸ್‌ನಿಂದ ಬಿಜೆಪಿಗೆ ಮರಳಿದ ಹಿನ್ನೆಲೆಯಲ್ಲಿ ಶುಕ್ರವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಖರ್ಗೆ, ಇತರ ಬೇರೆ ಪಕ್ಷಗಳ ನಾಯಕರನ್ನು ಸೆಳೆದು ಪಕ್ಷವನ್ನು ಬಲಪಡಿಸುವುದು ನ್ಯಾಯಯುತವಾಗಿದೆ. ಆದರೆ ಅವರ ನಿಷ್ಠೆಯನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಖರೀದಿಸುವ ಸಮಯದಲ್ಲಿ, ಖರೀದಿದಾರರು ಅನೇಕ ಬಾರಿ ಯೋಚಿಸುತ್ತಾರೆ ಮತ್ತು ಅವುಗಳ ತೂಕ, ಅಳತೆಯನ್ನು ಪರಿಶೀಲಿಸುತ್ತಾರೆ. ಅಂತೆಯೇ ಇತರರನ್ನು ಕಾಂಗ್ರೆಸ್‌ಗೆ    ಸೇರ್ಪಡೆ ಮಾಡುವಾಗ ಎಚ್ಚರಿಕೆಯಿಂದ ಪರಿಗಣಿಸಬೇಕು. ಅವರನ್ನು ಪಕ್ಷಕ್ಕೆ ಕರೆತರುವಾಗ ಅವರ ಪಾತ್ರ, ಅವರು ಇದ್ದ ಪರಿಸ್ಥಿತಿ ಮತ್ತು ಸಿದ್ಧಾಂತಗಳು, ಅವರ ನಂಬಿಕೆ ಬಗ್ಗೆ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಪಕ್ಷವು ಸಿದ್ಧಾಂತ ಮತ್ತು ತತ್ವಗಳ ಆಧಾರ ಸ್ತಂಭಗಳ ಮೇಲೆ ನಿಂತಿದೆ. ಪಕ್ಷದ ನಾಯಕರು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷವು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಬಗ್ಗೆ ಕಾಳಜಿ ವಹಿಸುತ್ತದೆ. ಅನೇಕ ದೇಶಗಳಲ್ಲಿ ವಿಶೇಷವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇತ್ತೀಚಿನ ಎರಡು ಮೂರು ದಶಕಗಳವರೆಗೆ ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ನೀಡಲಾಗಿಲ್ಲ. ಆದರೆ ಸಂವಿಧಾನ ಜಾರಿಗೆ ಬಂದಾಗ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಇದರ ಹಿಂದೆ ಶ್ರಮಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ.

ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಈ ಮೌಲ್ಯಗಳನ್ನು ರಕ್ಷಿಸಬೇಕಾಗಿದೆ. ಹಲವರಿಗೆ ಇತಿಹಾಸ ಗೊತ್ತಿಲ್ಲ, ಸ್ವಾತಂತ್ರ್ಯ ಹೋರಾಟ ನಡೆಸಿದವರು ಯಾರು? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂಬುದು ಯುವಕರಿಗೆ ಗೊತ್ತಿಲ್ಲ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಸಂವಿಧಾನವನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಉಳಿಸಿದರೆ ಭವಿಷ್ಯದ ಪೀಳಿಗೆಗೆ ಅವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ.

ಸಂವಿಧಾನವನ್ನು ಜಾರಿಗೊಳಿಸುವ ಜನರು ನ್ಯಾಯಯುತ ವ್ಯಕ್ತಿಗಳಾಗಿರಬೇಕು, ಆಗ ಅದು ಉತ್ತಮ ಪರಿಣಾಮಗಳನ್ನು ಬೀರುತ್ತದೆ ಇಲ್ಲದಿದ್ದರೆ ಫಲಿತಾಂಶಗಳು ಉತ್ತಮವಾಗಿರುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. 1949ರಲ್ಲಿ ಅಂಬೇಡ್ಕರ್ ಹೇಳಿದ ಮಾತು ಇಂದಿನ ದಿನಗಳಲ್ಲಿ ನಿಜವಾಗುತ್ತಿದೆ. ಸಂವಿಧಾನವನ್ನು ಅನುಷ್ಠಾನಕ್ಕೆ ತರುತ್ತಿರುವ ಜನರು ಸದುದ್ದೇಶವನ್ನು ಹೊಂದಿಲ್ಲದಿರುವುದರಿಂದ, ರಾಷ್ಟ್ರವು ಅನೇಕ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಎದುರಿಸುತ್ತಿದೆ ಎಂದು ಖರ್ಗೆ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!