ವರಾಹ ಜಯಂತಿಯ ಅಂಗವಾಗಿ ಕೃಷ್ಣರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಲಕ್ಷ್ಮೀ ಸಮೇತ ಭೂವರಹನಾಥ ಸ್ವಾಮಿಗೆ ವಿಶೇಷ ಪೂಜೆ.
ದೇಶದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ, 17 ಅಡಿ ಎತ್ತರದ ಬೃಹತ್ ವರಾಹನಾಥಸ್ವಾಮಿಯ ಮೂರ್ತಿಗೆ ಪವಿತ್ರ ಗಂಗಾಜಲ, 01 ಸಾವಿರ ಲೀಟರ್ ಹಾಲು, 500ಲೀಟರ್ ಎಳನೀರು, 500ಲೀ ಕಬ್ಬಿನ ಹಾಲು, ಹಸುವಿನ ತುಪ್ಪ, ಜೇನುತುಪ್ಪ, ಸುಗಂಧ ದ್ರವ್ಯಗಳಲ್ಲಿ ವಿಶೇಷವಾಗಿ ಅಭಿಷೇಕ ಮಾಡಲಾಯಿತು.
ಅರಿಶಿನ ಮತ್ತು ಶ್ರೀ ಗಂಧದಿಂದ ಅಲಂಕರಿಸಿ ಮಲ್ಲಿಗೆ, ಸಂಪಿಗೆ, ಕನಕಾಂಬರ, ಜಾಜಿ, ಮರಳೆ, ಪತ್ರೆಗಳು ಸೇರಿದಂತೆ 58ಬಗೆಯ ವಿವಿಧ ಹೂವುಗಳಿಂದ ಅಭಿಷೇಕ ಮಾಡಲಾಯಿತು.
ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠಾಧೀಶರಾದ ಪರಕಾಲ ಸ್ವಾಮೀಜಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ವಿಗ್ರಹದ ಸುತ್ತಲೂ ಏಳು ಸುತ್ತು ಪ್ರದಕ್ಷಿಣೆ ಹಾಕಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವರಹಾಜಯಂತಿಯ ಅಂಗವಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ವರಹಾ ಜಯಂತಿ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರಿಗೆ ಬಿಸಿಬೇಳೆಬಾತ್, ಸಿಹಿಪೊಂಗಲ್, ಖಾರಾಭಾತ್ ಹಾಗೂ ಲಡ್ಡು ಪ್ರಸಾದವನ್ನು ವಿವರಿಸಲಾಯಿತು.
ಇಂದಿನ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬೂಕನಕೆರೆ ರಾಜಶೇಖರ, ಚಲನ ಚಿತ್ರ ನಿರ್ಮಾಪಕರಾದ ಸೂರಪ್ಪಬಾಬು, ರಾಕ್ ಲೈನ್ ವೆಂಕಟೇಶ್, ಸಚಿವರಾದ ನಾರಾಯಣಗೌಡರ ಧರ್ಮಪತ್ನಿ ದೇವಕಿ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.