ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಮಳೆಯ ಅಬ್ಬರ ಅರಂಭವಾಗಿರುವ ಬೆನ್ನಲ್ಲೇ ಜಿಲ್ಲೆಯ ಜೀವನಾಡಿ ಕೆ.ಆರ್.ಸಾಗರ ಜಲಾಶಯಕ್ಕೆ 2520 ಕ್ಯೂಸಕ್ ನೀರಿನ ಒಳಹರಿವು ದಾಖಲಾಗಿದೆ.
ಗುರುವಾರ ರಾತ್ರಿ 8 ಗಂಟೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯದಲ್ಲಿ 124.80 ಗರಿಷ್ಟ ಮಟ್ಟದ ಪೈಕಿ 79 ಅಡಿ ನೀರಿನ ಸಂಗ್ರಹ ಹಾಗೂ 312 ಕ್ಯೂಸೆಕ್ ಹೊರಹರಿವಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಇದೇ ದಿನ 115.70 ಅಡಿ ನೀರಿನ ಸಂಗ್ರಹ ಹಾಗೂ 30923 ಕ್ಯೂಸೆಕ್ ಒಳಹರಿವು ಮತ್ತು 3575 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.
ಪ್ರಸಕ್ತ ವರ್ಷ ಮುಂಗಾರು ತಡವಾಗಿ ಮಳೆ ಬೀಳದೆ ಅನಿಶ್ಚಿತ ವಾತಾವರಣ ಉಂಟಾಗಿತ್ತು. ಸದ್ಯ ವರುಣ ಕೃಪೆ ತೋರಿದ ಹಿನ್ನಲೆ ಕಾವೇರಿ ಜಲನಯನ ಪ್ರದೇಶದ ಜನರಲ್ಲಿ ಚಟುವಟಿಕೆ ಗರಿಗೆದರುತ್ತಿದೆ.