1818 ರ ಜನವರಿ 1 ರಂದು ಪೇಶ್ವೆಯರ ವಿರುದ್ಧ ಸಿದ್ಧನಾಕ ನಾಯಕತ್ವದಲ್ಲಿ 500 ಮಹರ್ ಸೈನಿಕರು ಪೇಶ್ವೆ ಬಾಜಿರಾವ್ ನ 28,000 ಸೈನಿಕರನ್ನು ಸೋಲಿಸಿದ ವಿಜಯೋತ್ಸವದ ದಿನದ ಅಸ್ಪೃಶ್ಯತೆ ವಿರುದ್ದದ ಮೊದಲ ಸಂಗ್ರಾಮ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಯನ್ನು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ದಲಿತ ಮುಖಂಡರು ಸಂಭ್ರಮದಿಂದ ಆಚರಿಸಿದರು.
ನೂರಾರು ದ್ವಿಚಕ್ರ ವಾಹನಗಳ ಮೂಲಕ ಜೈ ಭೀಮ್ ಹಾಗೂ ಕೋರೆಗಾಂವ್ ಸಂಗ್ರಾಮ ಎಂಬ ಘೋಷಣೆಯೊಂದಿಗೆ ಬೆಳ್ಳೂರ್ ಕ್ರಾಸ್ ಮೂಲಕ ಬೆಳ್ಳೂರು ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಬೈಕ್ ಮೆರವಣಿಗೆ ಮಾಡಿ ವಿಜಯೋತ್ಸವದ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಗಣ್ಯರು ಡಾ.ಬಿ.ಆರ್. ಅಂಬೇಡ್ಕರ್ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳ್ಳೂರಿನ ದಲಿತ ಮುಖಂಡ ಆಟೋ ಶಿವಣ್ಣ ಮಾತನಾಡಿ, ನಾವೆಲ್ಲರೂ ಕೂಡ ಪ್ರಸ್ತುತ ದಿನದಲ್ಲಿ ಸಮಾನತೆಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್ ಕೊಟ್ಟಂತಹ ಸಿದ್ಧಾಂತಗಳು ಹಾಗೂ ಸಿದ್ದನಾಕ ನೇತೃತ್ವದಲ್ಲಿ ನಡೆದ ಭೀಮಾ ಕೋರೇಗಾಂವ್ ಹೋರಾಟ. ಈ ವಿಜಯೋತ್ಸವವನ್ನು ನಾವೆಲ್ಲರೂ ನೆನೆಯಲೇಬೇಕು ಎಂದರು.
ದಲಿತ ಮುಖಂಡ ಕ್ಯಾತನಹಳ್ಳಿ ಮಂಜುನಾಥ ಮಾತನಾಡಿ, 28,000 ಪೇಶ್ವೆ ಬಾಜಿರಾವ್ ನ ಸೈನಿಕರನ್ನು ಕೇವಲ 500 ಜನ ಮೆಹರ್ ಸೈನಿಕರು ಹೊಡೆದು ಉರುಳಿಸಿದ್ದು ಹೆಮ್ಮೆಯ ವಿಚಾರವೆಂದರು.
ಮತ್ತೊಬ್ಬ ಮುಖಂಡ ಕಂಚಿನಕೋಟೆ ಮೂರ್ತಿ ಮಾತನಾಡಿ, ಕೋರೆಗಾಂವ್ ಯುದ್ಧದ ಚರಿತ್ರೆಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕಂಚಿನ ಕೋಟೆ ಮೂರ್ತಿ, ಕ್ಯಾತನಹಳ್ಳಿಮಂಜುನಾಥ, ರಂಗೇಗೌಡ, ಆಟೋ ಶಿವಣ್ಣ, ಲೋಹಿತ್, ಶಿವು, ಸುರೇಶ್, ಮನು, ಕೆಂಪಣ್ಣ, ವೆಂಕಟೇಶ್, ಪುಟ್ಟರಾಜು ಸೇರಿದಂತೆ ನೂರಾರು ಶೋಷಿತರು ಭಾಗವಹಿಸಿದ್ದರು.