Tuesday, May 21, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯ ಅಪಾಯಕಾರಿತನ ಎತ್ತಿ ತೋರಿಸಿದ ಡೇಂಜರ್ ಜಾಹೀರಾತು: ರಾಜೇಂದ್ರ ಪ್ರಸಾದ್

ಕಾಂಗ್ರೆಸ್ ಪಕ್ಷದ ಚೊಂಬು ಜಾಹೀರಾತಿಗೆ ತಿರುಗೇಟು ನೀಡಲು ಬಿಜೆಪಿ ಪ್ರಕಟಿಸಿರುವ ಡೇಂಜರ್ ಜಾಹೀರಾತು ಅಕ್ಷರಶಃ ಬಿಜೆಪಿಯ ಅಪಾಯಕಾರಿತನವನ್ನೇ ಪ್ರತಿನಿಧಿಸುತ್ತಿದೆ ಎಂದು ಸಾಹಿತಿ, ವಿಮರ್ಶಕ ರಾಜೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಾಂಗೆಸ್ ವಿರುದ್ಧವಾಗಿ ಬಿಜೆಪಿ ಪ್ರಾಯೋಜಿಸಿರುವ ಜಾಹೀರಾತಿನಲ್ಲಿ ಯಾವುದೇ ಅಭಿವೃದ್ಧಿ ಮತ್ತು ರಾಜ್ಯಕ್ಕೆ ಬೇಕಾದ ಸವಲತ್ತುಗಳ ಆಶ್ವಾಸನೆಗಳಿಲ್ಲ. ಬದಲಿಗೆ ಮುಸ್ಲಿಂ ದ್ವೇಷವೇ ಮೈವೆತ್ತಿ ನಿಂತಿದೆ. ಒಂಬತ್ತು ಪ್ರಶ್ನೆಗಳಿರುವ ಈ ಜಾಹೀರಾತಿನಲ್ಲಿ ಐದು ಪ್ರಶ್ನೆಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದರೆ, ಉಳಿದವು ತಮ್ಮದೇ ಪಕ್ಷದ ವೈಫಲ್ಯಗಳನ್ನು ಮುಚ್ಚಿಹಾಕುವ ಕಳ್ಳ ಪ್ರಶ್ನೆಗಳಾಗಿವೆ.

1. ದಲಿತ ಕಲ್ಯಾಣದ ಬಗ್ಗೆ ಮಾತಾಡುವ ಅರ್ಹತೆಯೇ ಬಿಜೆಪಿಗೆ ಇಲ್ಲ. ಮೀಸಲಾತಿ ಬಗ್ಗೆ ಅತ್ಯಂತ ನೀಚ ಅಭಿಪ್ರಾಯ ಹರಡಿದವರು ಬಿಜೆಪಿ ಮತ್ತು ಸಂಘ ಪರಿವಾರಗಳೇ ಆಗಿವೆ.
ಅದು ಅಲ್ಲದೇ ಈ ಬಾರಿ 400 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನೇ ಬದಲು ಮಾಡುವ ಘೋಷಣೆಗಳನ್ನು ಬಿಜೆಪಿಗರು ಈಗಾಗಲೇ ಮಾಡಿದ್ದಾರೆ. ಇಂತಹವರು ದಲಿತರ ಕಲ್ಯಾಣದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ.

2. ಕುಕ್ಕರ್ ಬಾಂಬ್ ಸ್ಫೋಟವೋ, ಮತ್ತೊಂದೋ. ಮಾಡುವ ಎಲ್ಲರೂ ಅಪರಾಧಿಗಳೇ, ಅದಕ್ಕೆ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಆದ್ರೆ ಮಂಗಳೂರು ಬಾಂಬ್ ಸ್ಪೋಟ ಮಾಡಲು ಯತ್ನಿಸಿದ ಆದಿತ್ಯ ರಾವ್ ಕಥೆಯನ್ನು ಮರೆತು ಬಿಜೆಪಿಗರು ಇದನ್ನ ಮಾತ್ರ ನೆನೆಪಿಸಿಕೊಳುವುದು ಯಾಕೆ? ಅದೇ ಮಂಗಳೂರಿನಲ್ಲಿ ಬಿಜೆಪಿಯ RTI ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಕೇಸು ಯಾಕೆ ನೆನಪಾಗುವುದಿಲ್ಲ? ( ಇದರ ಪ್ರಮುಖ ಆರೋಪಿ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷನಾಗಿದ್ದ)

3. ಗಲಭೆಕೋರರನ್ನು ಓಲೈಸುವುದು ಯಾರು? ನೀವೇ ಅಲ್ಲವೇ? ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಹೇಳಿಕೆ ಕೊಟ್ಟವರು ಯಾರು? ಕೋಮುಗಲಭೆಗಳನ್ನು ಸೃಷ್ಟಿಸಲು ಸದಾ ಪಣ ತೊಟ್ಟು ನಿಂತಿರುವವರು ಯಾರು? ಕನ್ನಡಿಯ ಮುಂದೆ ನಿಂತು ಬಿಜೆಪಿ ಮಾತನಾಡಿಕೊಂಡಂತಿದೆ.

4. ಕನ್ನಡಿಗರ ಪಾಲಿನ ಕಾವೇರಿ ನೀರನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರ ಇದ್ದಾಗ ತೆಗೆದುಕೊಂಡ ಕ್ರಮಗಳೇನು? ತಾವು ಕೂಡ ಹರಿಯಲು ಬಿಟ್ಟಿದ್ದಿರಲ್ಲ! ಒಕ್ಕೂಟದಲ್ಲಿ ಇದ್ದದ್ದು ಮೋದಿ ಸರ್ಕಾರ ಮತ್ತು ನದಿ ಪ್ರಾಧಿಕಾರ ಬರುವುದು ಅವರ ಅಧೀನದಲ್ಲಿ. ನೀವೇ ಹೇಳಿ ನಿಲ್ಲಿಸಬಹುದಿತ್ತಲ್ಲ. ಯಾಕೆ ಮಾಡಲಿಲ್ಲ?ಇದು ಆಷಾಢಭೂತಿತನವಲ್ಲವೇ?

5. ವಿಧಾನಸೌಧದಲ್ಲಿ ಘೋಷಣೆ ಕೂಗಿದ್ದು ಸಾಬೀತು ಆದಾಗ ಅವರ ಮೇಲೆ ಮೊಕದ್ದಮೆ ಹೂಡಲಾಗಿದೆ. ಆದ್ರೆ ಬಿಜೆಪಿ- ಸಂಘ ಪರಿವಾರದವರು ವಿಜಯಪುರ‌ ಜಿಲ್ಲೆಯ ಸಿಂದಗಿಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಿ ಸಿಕ್ಕಿಕೊಂಡಿದ್ದರಲ್ಲ ಅದು ಯಾಕೆ ಮರೆತುಹೋಯಿತು. ಕರ್ನಾಟಕ, ಇಂಡಿಯಾಕ್ಕಿಂತ ನಿಮಗೆ ಪಾಕಿಸ್ತಾನದ ಪ್ರೇಮವೇ ಜಾಸ್ತಿಯಲ್ಲ ಯಾಕೆ?

6. ಹೊಟೆಲ್ ಇರಲಿ… ಕಾಶ್ಮೀರದ ಪುಲ್ವಮಾದ ಮಿಲಿಟರಿ ಕ್ಯಾಂಪಸ್ ಗೆ 350 ಕೆಜಿ RDX ಹೇಗೆ ಹೋಯಿತು ಮತ್ತು ಅದು ಸ್ಫೋಟಗೊಂಡು ಸೈನಿಕರು ಸತ್ತರಲ್ಲ? ಅದರ ತನಿಖೆ ಎನಾಯಿತು?
ಅದು ಮೋದಿ ಸರ್ಕಾರದ ಇದ್ದಾಗಲೇ ಅಲ್ಲವೇ? ಸೈನಿಕರು, ನಾಗರೀಕರು ಹಲವಾರು ಸ್ಫೋಟ ಗಳಿಗೆ, ಹಿಂಸಾಚಾರಗಳಿಗೆ ತುತ್ತಾಗಿದ್ದಾರೆ..(ದೆಹಲಿ-ಮಣಿಪುರ ಇತ್ಯಾದಿ) ಅವು ಮರೆತುಹೋದವೇ?

7. ಲವ್ ಜಿಹಾದ್ ಆಗಿರುವ ಕೇಸುಗಳು ಎಷ್ಟು? ಅದಕ್ಕೆ ಪುರಾವೆಗಳು ಇದ್ದಲ್ಲಿ ನ್ಯಾಯಾಲಯದಲ್ಲಿ ಸಾಬೀತು ಮಾಡಬಹುದಿತ್ತಲ್ಲ. ಯಾಕೆ ಬಿಜೆಪಿ ಮಾಡದೇ ಕಾಲ ಹರಣ ಮಾಡಿತು. ಕೊಲೆಗಳು ನಡೆಯಲಿ ಎಂದು ಕಾದು ಕೂತಿತ್ತೆ? ಹೆಣದ ರಾಜಕೀಯ ಬಿಜೆಪಿಗೆ ಬಲು ಪ್ರಿಯ. ಅದ್ರೆ ಅಸಲಿಗೆ ಬಿಜೆಪಿಯು ಮಾಡಿದ “ಲವ್ ಜಿಹಾದ್ / ಹೆಣದ ರಾಜಕೀಯಗಳು” ಯಾವುದೇ ಪುರಾವೇ ಇಲ್ಲದೆ ಮಾಕಾಡೆ ಬಿದ್ದಿವೆ.

8. ನಕ್ಸಲ್ ಹೋರಾಟ ಕರ್ನಾಟಕದಲ್ಲಿ ಈಗ ಎಲ್ಲಿದೆ ಸ್ವಾಮಿ? ಶೇ.99ರಷ್ಟು ಬಿದ್ದುಹೋಗಿದೆ. ಅದರ ಸುಳಿವೇ ಇಲ್ಲ. ಅದಿದ್ದರೆ ನಿಮ್ಮ ಜಾಹೀರಾತು ಮತ್ತು ಪ್ರೊಪಗಾಂಡದಲ್ಲಷ್ಟೇ ಜೀವಂತವಾಗಿದೆ! ಕನ್ನಡನಾಡಿನಲ್ಲಿ ಬಿಜೆಪಿ ಗೂಂಡಾಗಿರಿ ಹುಟ್ಟಿದೆ. ಅದರ ಬಗ್ಗೆ ಮಾತಾಡಿ..

9. ಪ್ರಪಂಚದ ಅತಿದೊಡ್ಡ ‘ದನದ ಮಾಂಸ’ ಮಾರಾಟಗಾರಿಕೆಯ ದೇಶವಾಗಿ ಭಾರತ ರೂಪುಕೊಂಡಿದೆ. ಮೋದಿ ಸರ್ಕಾರದ ಅವಧಿಯಲ್ಲಿ ದನದ ಮಾಂಸ ರಪ್ತು ಮಾಡುವ ರಾಷ್ಟ್ರಗಳಲ್ಲಿ ನಂಬರ್ ಒನ್ ರಾಷ್ಟ್ರವಾಗಿ ನಮ್ಮ ದೇಶ ಹೊರಹೊಮ್ಮಿದೆ. ಈ ದನದ ಮಾಂಸ ರಪ್ತು ಮಾಡುವ ಕಂಪನಿಗಳು ಹಿಂದೂ ಮತ್ತು ಜೈನರ ಮಾಲೀಕತ್ವದಲ್ಲಿದೆ ಮತ್ತು ಅವು ಬಿಜೆಪಿಯ ಚುನಾವಣಾ ಬಾಂಡುಗಳನ್ನು ಕೋಟಿಗಟ್ಟಲೆ ಹಣ ನೀಡಿ ಕೊಂಡುಕೊಂಡಿವೆ ಯಾಕೆ? ಇಂತಹ ಕಂಪನಿಗಳೇ ತಾನೇ ಕಸಾಯಿಖಾನೆಗಳನ್ನು ಹುಟ್ಟುಹಾಕುವುದು, ಬೆಳೆಸುವುದು. ಅತ್ತ ಕಂಪನಿಯು ನಿಮ್ಮ ಕಡೆಯವರದ್ದು ಇತ್ತ ಗೋ ಕಾರ್ಯಕರ್ತರು ನಿಮ್ಮ ಕಡೆಯವರು. ಈ ಡಬಲ್ ಗೇಮ್ ಸಮಾಚಾರ ಏನು?

ಸರಿ.ಅಕ್ರಮ ಕಸಾಯಿಖಾನೆ ಮತ್ತು ಸಾಗಣೆಗೆ ಕಾನೂನು ಇವೆಯಲ್ಲ? ನೀವು ನಿಮ್ಮ ಕಾರ್ಯಕರ್ತರು ಇದುವರೆಗು ಎಷ್ಟು ಕೇಸು ದಾಖಲಿಸಿದ್ದೀರಿ? ಅವುಗಳಲ್ಲಿ ಎಷ್ಟು ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿವೆ ತಿಳಿಸಬೇಕಲ್ಲವೇ? ಬರೀ ಗೋವಿನ ಹೆಸರಿನ ಗೂಂಡಾಗಿರಿ ಮಾಡಿದರೆ ಆದೀತೇ?

ಬಿಜೆಪಿಯ ಈ ಜಾಹೀರಾತು ಅದರ ಬಣ್ಣವನ್ನೇ ಬಯಲು ಮಾಡುತ್ತಿದೆಯೇ ಹೊರತು ರಾಜ್ಯದ ನಾಗರೀಕರಿಗೆ ಬೇಕಾದ ಮೂಲಭೂತ ಅಗತ್ಯಗಳು, ಆರೋಗ್ಯ, ಶಿಕ್ಷಣ, ಕೃಷಿ, ಮಾರುಕಟ್ಟೆ, ಉದ್ಯೋಗ, ಆರ್ಥಿಕತೆಗಳನ್ನು ಕುರಿತ ಭರವಸೆ ಮತ್ತು ಆಶ್ವಾಸನೆಗಳನ್ನು ನೀಡುತ್ತಿಲ್ಲ. ಅಂದರೆ ಬಿಜೆಪಿಯು ಆಡಳಿತ ನಡೆಸಲು ಯೋಗ್ಯವಾಗಿಲ್ಲ.

ಎಚ್ಚರಿಕೆ: ಬಿಜೆಪಿ ವಿಷಕಾರಿ ಮತ್ತು ಸೋಂಕುಕಾರಿ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!