Friday, September 20, 2024

ಪ್ರಾಯೋಗಿಕ ಆವೃತ್ತಿ

ದೇಶದ 22 ರಾಜ್ಯಗಳಿಂತ ಹೆಚ್ಚು ಬಡತನ ಗುಜರಾತಿನಲ್ಲಿದೆ, ಇಂತಹ ಮಾಡೆಲ್ ಬೇಕಾ ?- ಕೃಷ್ಣಪ್ರಸಾದ್‌

“ನಾವು ಗುಜರಾತ್‌ ಮಾಡೆಲ್‌ ಎಂಬ ಟ್ರ್ಯಾಪ್‌ಗೆ ಬಿದ್ದಿದ್ದೇವೆ. ಮಾಧ್ಯಮಗಳು ʼಗುಜರಾತ್‌ ಮಾಡೆಲ್‌ʼಎಂದು ಹೇಳಿ ಹೇಳಿ ಜನರ ತಲೆಗೆ ತುಂಬಿವೆ. ಆದರೆ, ಗುಜರಾತ್‌ ಮಾಡೆಲ್‌ಗೂ ಮತ್ತು ಕರ್ನಾಟಕ ಮಾಡೆಲ್‌ಗೂ ಬಹಳ ವ್ಯತ್ಯಾಸವಿದೆ. ‘ಕರ್ನಾಟಕ ಮಾದರಿ’ ಎಂಬ ಐಡಿಯಾವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಅಗತ್ಯವಿದೆ” ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‌ ಹೇಳಿದರು.

ಬೆಂಗಳೂರಿನಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ʼನಮ್ಮ ಕರ್ನಾಟಕ ನಮ್ಮ ಮಾದರಿʼ ಚಿಂತನಾ ಸಮಾವೇಶದಲ್ಲಿ ʼಬದಲಾಗಬೇಕಿರುವ ಮಾಧ್ಯಮಗಳ ಮಾದರಿʼ ಕುರಿತು ಮಾತನಾಡಿದರು.

“ಕರ್ನಾಟಕದ ಮಾಧ್ಯಮಗಳ ಮಾದರಿ ಬದಲಾಗಬೇಕಾ ಅಥವಾ ದೃಷ್ಟಿಕೋನ ಬದಲಾಯಿಸಬೇಕಾ ಎಂದು ಯೋಚಿಸಬೇಕಾಗಿದೆ. ಮಾಧ್ಯಮಗಳ ಮಾದರಿ ಬದಲಾಯಿಸುವುದು ಕಷ್ಟ. ದೃಷ್ಟಿಕೋನ ಬದಲಾಯಿಸಬೇಕೆಂದ್ರೆ ಕರ್ನಾಟಕದ ಮಾಧ್ಯಮಗಳ ದೃಷ್ಟಿಕೋನ ಬದಲಾಯಿಸಬೇಕಾ ಅಥವಾ ಕರ್ನಾಟಕದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳ ದೃಷ್ಟಿಕೋನ ಬದಲಾಯಿಸಬೇಕಾ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ” ಎಂದರು.

“ನಮ್ಮಲ್ಲೇ ಕರ್ನಾಟಕ ಮಾದರಿ ಇದೆ. ಕೊಚ್ಚಿಕೊಳ್ಳಲು ಬೇಕಾದಷ್ಟು ಇವೆ. ಮಾಡೆಲ್‌ ಎಂದು ಹೇಳಿದ ತಕ್ಷಣ ಮನಸ್ಸಿಗೆ ಬರುವುದು ಗುಜರಾತ್‌ ಮಾಡೆಲ್‌. ಮಾಧ್ಯಮಗಳು ಜನರ ಕಿವಿ, ತಲೆಗೆ ಈ ಗುಜರಾತ್‌ ಮಾಡೆಲನ್ನು ತುಂಬಿವೆ.

ದೇಶದ 30 ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಶ್ರೀಮಂತ ರಾಜ್ಯ. 150% ಹೆಚ್ಚು ತೆರಿಗೆ ಸಂಗ್ರಹಿಸುತ್ತಿದೆ. 12% ನೇರ ತೆರಿಗೆ ಸಂಗ್ರಹವಾಗುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜಾಗತಿಕ ಹೂಡಿಕೆ ಆಗುತ್ತಿದೆ. ತಮಿಳುನಾಡಿನ ನಂತರ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ರಾಜ್ಯ ಕರ್ನಾಟಕ. ಗುಜರಾತ್‌ ಈ ಯಾವುದರಲ್ಲೂ ಮುಂದೆ ಇಲ್ಲ” ಎಂದರು.

“ನಾವು ನಮ್ಮ ಮಾದರಿಯನ್ನು ಅರಿಯುವ ಅಗತ್ಯವಿದೆ. 1881 ಪ್ರಜಾಪ್ರತಿನಿಧಿ ಸಭಾ ಸ್ಥಾಪಿಸಿದ ಮೊದಲ ರಾಜ್ಯ. 1897 ಮೊದಲ ಚುನಾವಣೆ ನಡೆಸಿದ್ದೇವೆ. 1903ರಲ್ಲಿ ಅಂದರೆ 120 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಸುಸಜ್ಜಿತ ಸ್ಮಾರ್ಟ್‌ ಸಿಟಿ ಕಟ್ಟಲಾಗಿದೆ. 1933ರಲ್ಲಿ ಇಂಗ್ಲಿಷ್‌ ಶಾಲೆ, 1981 ಮೊದಲ ಮಹಿಳಾ ಕಾಲೇಜು ಸ್ಥಾಪಿಸಿದ್ದೇವೆ. 1907ರಲ್ಲಿ ಎಲೆಕ್ಟ್ರಿಸಿಟಿ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕದಲ್ಲಿ ಮೀಸಲಾತಿಯನ್ನು 1902ರಲ್ಲಿ ಜಾರಿಗೆ ತರಲಾಗಿದೆ. ಇದ್ಯಾವುದೂ ಗುಜರಾತಿನಲ್ಲಿ ಆಗಿರಲಿಲ್ಲ.

“ದೇಶದ 22 ಬೇರೆ ರಾಜ್ಯಗಳಿಂತ ಹೆಚ್ಚು ಬಡತನ ಗುಜರಾತಿನಲ್ಲಿದೆ. ಹೆಚ್ಚು ಶಾಲೆ ಬಿಟ್ಟವರು, 3.8 ಲಕ್ಷ ತೆರಿಗೆ ಪಾವತಿಸದವರು ಗುಜರಾತಿನಲ್ಲಿದ್ದಾರೆ. ಸಾಲ ಮರುಪಾವತಿ ಮಾಡದವರು ಹೆಚ್ಚು ಇರುವುದು ಗುಜರಾತಿನಲ್ಲಿ. ಕರ್ನಾಟಕದ ಬಡತನದ ಪ್ರಮಾಣ 13.2%, ಗುಜರಾತ್‌ನ ಬಡತನ ಪ್ರಮಾಣ 28.6% ಇದೆ. ರಾಜ್ಯದ ಜನರ ತಲಾ ಆದಾಯ ರೂ.1,68,000 ಇದೆ” ಎಂದರು.

“2011ರಲ್ಲಿ ಗ್ಲೋಬಲ್‌ ಇನ್ವೆಸ್ಟರ್ಸ್‌ ಮೀಟ್‌ ಅಂತ ಶುರು ಮಾಡಿದ್ರು. ರೂ. 40 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಸುಳ್ಳು ಹಬ್ಬಿಸಿದ್ರು. ಪಿ ಚಿದಂಬರಂ ಪ್ರಕಾರ ನಿಜವಾಗಿ ಬಂದಿರೋದು ರೂ. 3ಲಕ್ಷದ 11 ಸಾವಿರ ಕೋಟಿ ಮಾತ್ರ” ಎಂದರು.

ಬುದ್ದಿಭಾಗ್ಯ ಜಾರಿಗೆ ತನ್ನಿ

“ಕರ್ನಾಟಕ ಸರ್ಕಾರದವರು ಅನ್ನಭಾಗ್ಯ, ಕ್ಷೀರಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದ್ದೀರಿ. ಆದರೆ ಮಾಧ್ಯಮಗಳಿಗೆ ʼಬುದ್ದಿಭಾಗ್ಯʼ ಎಂಬ ಯೋಜನೆ ಜಾರಿ ಮಾಡುವ ಅಗತ್ಯವಿದೆ. ಟಿವಿ ಶೋಗೂ ಮತ್ತು 9 ಗಂಟೆಯ ಬಾರ್‌ ಗೂ ಏನೂ ವ್ಯತ್ಯಾಸವಿಲ್ಲ. ಬಾರಿನಲ್ಲಿ ಕುಡಿದು ಮಾತನಾಡುತ್ತಾರೆ, ಇವರೂ ಹಾಗೇ ಮಾತನಾಡುತ್ತಾರೆ” ಎಂದು ಲೇವಡಿ ಮಾಡಿದರು.

“2023ರ ಚುನಾವಣೆಯಲ್ಲಿ ಈ ಫಲಿತಾಂಶ ಬಂದಿರೋದು ಮಾಧ್ಯಮಗಳ ಕಾರಣದಿಂದ ಅಲ್ಲ. ಮಾಧ್ಯಮಗಳಿಂದ ಹೊರತಾಗಿ ಬಂದ ಫಲಿತಾಂಶ. ಅವರು ಒಂದಷ್ಟು ಬದಲಾಗಬೇಕಂದ್ರೆ ಬುದ್ದಿಭಾಗ್ಯವನ್ನು ಶುರುಮಾಡಬೇಕು. ಈ ಮಾಡೆಲ್‌ ಅನ್ನು ಪ್ರಚಾರ ಮಾಡಬೇಕು. ನಾವು ನಮ್ಮ ನಮ್ಮಲ್ಲೇ ಮಾತನಾಡಿಕೊಂಡರೆ ಪ್ರಯೋಜನವಿಲ್ಲ. ಕೇರಳ ಮಾಡೆಲ್‌ ಹೇಗೆ ಎಲ್ಲರಿಗೂ ಗೊತ್ತಿದೆಯೋ ಅದೇ ರೀತಿ ಕರ್ನಾಟಕ ಸರ್ಕಾರ ಈ ಮಾಡೆಲ್‌ ಅನ್ನು ಬೇರೆಯವರಿಗೆ ಪರಿಚಯಿಸಬೇಕು. ಕರ್ನಾಟಕ ಮಾಡೆಲ್‌ಗಳ ಬಗ್ಗೆ ಮುಂಬೈ, ದೆಹಲಿ, ಕೋಲ್ಕತ್ತ, ಬಾಂಬೆಯ ಮಾಧ್ಯಮಗಳ ಸಂಪಾದಕರಿಗೆ ತಿಳಿಸುವ ಅಗತ್ಯ ಇದೆ. ಗ್ಲೋಬಲ್‌ ಮೀಡಿಯಾಗಳನ್ನು ಕರೆದು ತಂದು ಗುಜರಾತಿನ ಮಾಡೆಲ್ ಬಗ್ಗೆ ಪ್ರಚಾರ ಮಾಡಲಾಗಿದೆಯೋ ಅದೇ ರೀತಿ ನಾವೂ ಮಾಡುವ ಅಗತ್ಯ ಇದೆ. ಕರ್ನಾಟಕದ ಮಾದರಿಯನ್ನು ಯುನಿವರ್ಸಿಟಿಗಳಲ್ಲಿ ಮಾತನಾಡಲು ಶುರು ಮಾಡಬೇಕು. ಪಠ್ಯಗಳಲ್ಲಿ ಅಳವಡಿಸಬೇಕು” ಎಂದು ಸಲಹೆ ನೀಡಿದರು.

“ಮುಖ್ಯವಾಹಿನಿ ಮಾಧ್ಯಮ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದ ಮಾಡೆಲ್‌ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಚುರಪಡಿಸಬೇಕು. ಪದೇ ಪದೇ ಮಾತನಾಡಲು ಶುರು ಮಾಡಬೇಕು. ಮಾಧ್ಯಮಗಳನ್ನು ಬದಲಾಯಿಸುವ ಶಕ್ತಿ ನಿಮ್ಮ ಕೈಯಲ್ಲಿದೆ. ಕಳಪೆ ಮಾಧ್ಯಮ, ಕಚಡಾ ನ್ಯೂಸ್‌ ಪೇಪರ್‌ಗಳನ್ನು ತಿರಸ್ಕರಿಸಿ. ಆಗ ಮಾಧ್ಯಮಗಳು ಚೂರು ಬದಲಾಗಬಹುದು” ಎಂದು ಎಚ್ಚರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!