ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ಉಪ ನಾಲೆಯ ಏರಿಯಂತಿದ್ದ ಗುಡ್ಡ ಕುಸಿದು ಬಿದ್ದಿದೆ.
ಇದಕ್ಕೆ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ನಡೆಯುತ್ತಿರುವ ಕಲ್ಲಗಣಿಗಾರಿಕೆಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೊರವಲಯದಲ್ಲಿರುವ ವಿಶ್ವೇಶ್ವರಯ್ಯ ಉಪ ನಾಲೆಗೆ ಏರಿಯಾಗಿ ಹೊಂದಿಕೊಂಡಿದ್ದ ಸುಮಾರು ನೂರು ಅಡಿ ಎತ್ತರದ ಗುಡ್ಡ ಸ್ವಲ್ಪ ಪ್ರಮಾಣದಲ್ಲಿ ಕುಸಿದು ಬಿದ್ದಿದೆ.
ಪಾಂಡವಪುರ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಶ್ರೀರಂಗಪಟ್ಟಣ, ಕೊಡಿಯಾಲ, ಗಣಂಗೂರು ಮಾರ್ಗವಾಗಿ ಮಳವಳ್ಳಿ ತಾಲ್ಲೂಕಿಗೆ ವಿ.ಸಿ.ಉಪ ನಾಲೆ ಮೂಲಕ ಕಾವೇರಿ ನೀರು ಸರಬರಾಜು ಆಗುತ್ತಿದೆ.
ಕನಗನಮರಡಿ ಗ್ರಾಮದ ಸಮೀಪ ಇರುವ ಉಪ ನಾಲೆಯ ಏರಿ ಗುಡ್ಡ ಕುಸಿದಿರುವುದರಿಂದ ಮಂದಕ್ಕೆ ನಾಲೆ ನೀರು ಸುಗಮವಾಗಿ ಹೋಗಲು ತೊಂದರೆ ಉಂಟಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಕನಗನಮರಡಿ ಗ್ರಾಮಸ್ಥರು ತೆರಳಿ ವೀಕ್ಷಿಸಿದ್ದಾರೆ.
ಕನಗನಮರಡಿ ಗ್ರಾಮದ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ವಿಶ್ವೇಶ್ವರಯ್ಯ ಉಪ ನಾಲೆ ಏರಿ ಗುಡ್ಡ ಕುಸಿದು ಬಿದ್ದಿದೆ. ಗಣಿಗಾರಿಕೆಯಲ್ಲಿ ಬ್ಲಾಸ್ಟ್ ಮಾಡುತ್ತಿದ್ದ ಪರಿಣಾಮ ನಾಲೆಯ ಗುಡ್ಡ ಬಿರುಕು ಬಿಟ್ಟಿದ್ದು, ಇದೀಗ ಗುಡ್ಡ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿ.ಸಿ ಉಪ ನಾಲೆಗೆ ಗುಡ್ಡ ಕುಸಿದು ಬಿದ್ದಿದೆ ಎಂದರೆ ಇದರಿಂದ ಮುಂದೆ ಅನಾಹುತ ಆಗುವ ಸಂಭವವಿದೆ.ಆದ್ದರಿಂದ ಕೂಡಲೇ ಕನಗನಮರಡಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ರದ್ದು ಮಾಡಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.