ಹನಿಯಂಬಾಡಿ ಜಗದೀಶ್
ಅಂತೂ ಇಂತೂ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಕೃಷ್ಣರಾಜ ಸಾಗರ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯನ್ನು ದಾಟಿದೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ಅನ್ನದಾತರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ವರ್ಷ ತೀವ್ರ ಬರದಿಂದ ಕಂಗೆಟ್ಟಿದ್ದ ರೈತರು, ಮಳೆ ಬೆಳೆ ಇಲ್ಲದೇ ಆಕಾಶದತ್ತ ದೃಷ್ಠಿ ನೆಟ್ಟು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರೂ ಇದರೊಂದಿಗೆ ಸಂಕಷ್ಟ ಸೂತ್ರದ ಅನ್ವಯ ತಮಿಳುನಾಡಿಗೆ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಬಿಡಿ ಎನ್ನುವ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಆದೇಶಗಳು ರೈತರನ್ನು ಮತ್ತಷ್ಟು ಕಂಗೆಡಿಸಿದ್ದವು.
ತೀವ್ರ ಬಿಸಿಲಿನ ಬೇಗೆ ಹಾಗೂ ಕೆರೆ-ಕಟ್ಟೆಗಳು ಬರಿದಾಗಿದ್ದರಿಂದ ಜಿಲ್ಲೆಯ ಜನತೆ ಅಲ್ಲಲ್ಲಿ ಕುಡಿಯುವ ನೀರಿಗೂ ಪರದಾಟುವಂತಹ ಸ್ಥಿತಿ ಉದ್ಭವವಾಗಿತ್ತು. ಅಲ್ಲದೇ ತೋಟಗಾರಿಗೆ ಬೆಳೆಗಳಾದ ತೆಂಗು, ಅಡಿಕೆ, ಮಾತು, ಸಪೋಟ, ವೀಳ್ಯೆದೆಳೆ ಬೆಳೆಗಳು ಕೈಗೆ ಹತ್ತದೇ ರೈತರು ನಷ್ಟು ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ಹವಾಮಾನ ಇಲಾಖೆ ಉತ್ತಮ ಮಳೆಯಾಗಲಿದೆ ಎಂಬ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಂತೆ ಕಾವೇರಿ ನದಿ ಪಾತ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಅಣೆಕಟ್ಟೆಯ ನೀರಿನ ಮಟ್ಟ ಶುಕ್ರವಾರ ಬೆಳಿಗ್ಗೆ 8 ಗಂಟೆಯ ವೇಳೆ 100.30 ಅಡಿಗೆ ತಲುಪಿದೆ.
ಇಂದಿನ ಕೆ.ಆರ್.ಎಸ್ ನೀರಿನ ಮಟ್ಟ (ಜು.5 ಬೆಳಿಗ್ಗೆ 8 ಗಂಟೆ ವೇಳೆಗೆ)
- ಗರಿಷ್ಟ ಮಟ್ಟ : 124.80 ಅಡಿ
- ಇಂದಿನ ನೀರಿನ ಮಟ್ಟ:100.30 ಅಡಿ
- ಒಳ ಹರಿವು: 9686 ಕ್ಯೂಸೆಕ್
- ಹೊರ ಹರಿವು: 546 ಕ್ಯೂಸೆಕ್
ಜುಲೈ 8 ರಿಂದ ನಾಲೆಗಳಿಗೆ ನೀರು
ಕೆ.ಆರ್.ಎಸ್ ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿ ತಲುಪಿದ ನಂತರ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎನ್.ಚಲುವರಾಯಸ್ವಾಮಿ ಅವರು, ಜು.6ರಂದು ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಂಡು, ಜು.8ರಿಂದಲೇ ನಾಲೆಗಳಿಗೆ ನೀರು ಬಿಡುವುದಾಗಿ ಘೋಷಣೆ ಮಾಡಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದ್ದು, ಎಂದಿನಂತೆ ಕೃಷಿ ಚಟುವಟಿಕೆ ಆರಂಭಿಸಲು ರೈತರು ಸಿದ್ದತೆ ನಡೆಸಿದ್ದಾರೆ.