ನನ್ನ ತಾತ,ನನ್ನ ತಂದೆ ಹೋರಾಟ ಮಾಡಿಕೊಂಡೇ ಬದುಕಿದ್ದರು.ಈಗ ಮೂರನೇ ತಲೆಮಾರಿನ ನನ್ನದು ಕೂಡ ಹೋರಾಟದ ಬದುಕೇ ಆಗಿದೆ.ನಿಮ್ಮ ಪರ ಹೋರಾಡಲು ನನಗೆ ಶಕ್ತಿ ನೀಡಿ ಎಂದು ಸ್ವಾಭಿಮಾನಿ ಪಡೆಯ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ಮನವಿ ಮಾಡಿದರು.
ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮದ ಲೆಮನ್ ಗ್ರಾಸ್ ಸಭಾಂಗಣದಲ್ಲಿ ಕಸಬಾ ಹೋಬಳಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನನ್ನ ತಾತ ಕೆ.ವಿ.ಶಂಕರಗೌಡರು ಜೀವನದುದ್ದಕ್ಕೂ ಹೋರಾಟ ಮಾಡುತ್ತಲೇ ಬಂದರು. ನನ್ನ ತಂದೆ ಕೆ.ಎಸ್.ಸಚ್ಚಿದಾನಂದ ಸಹ ಹೋರಾಟ ಮಾಡುತ್ತಲೇ ಮಡಿದರು. ಇನ್ನು ಮೂರನೇ ತಲೆಮಾರಿನ ನಾನೂ ಸಹ ಸಂಕಷ್ಟಗಳ ನಡುವೆಯೇ ಹೋರಾಟ ಮಾಡುತ್ತಿದ್ದೇನೆ.ನನಗೆ ಎಷ್ಟೇ ಕಷ್ಟ ಬಂದರೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.
ನನ್ನ ಕುಟುಂಬ ಜನಸೇವೆಗೆ ಅರ್ಪಿಸಿಕೊಂಡಿದೆ.ಒಂದುಬಸ್ವಂತ ಮನೆಯೂ ನಮ್ಮ ಕುಟುಂಬಕ್ಕೆ ಇಲ್ಲ.ಜನರ ಆಶೀರ್ವಾದವೇ ನಮಗೆ ಆಸ್ತಿ.ರಾಜಕೀಯ ಅಧಿಕಾರವನ್ನು ನಾನು ನನ್ನ ಸ್ವಾರ್ಥಕ್ಕಾಗಿ ಕೇಳುತ್ತಿಲ್ಲ. ಕಷ್ಟಗಳಿಂದ ಪಾರಾಗುವುದಕ್ಕೆ ಕೇಳುತ್ತಿದ್ದಾನೆಂದು ಭಾವಿಸಬೇಡಿ. ನಿಮ್ಮಗಳ ಸೇವೆ ಮಾಡುವ ಆಸೆಯಿಂದ ಮನವಿ ಮಾಡುತ್ತಿದ್ದೇನೆ. ನೀವೆಲ್ಲರೂ ಕೈ ಹಿಡಿದರೆ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತೇನೆ. ಸದಾಕಾಲ ನಿಮ್ಮೊಡನಿದ್ದು,ನಿಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾಗಿರುತ್ತೇನೆ ಎಂದು ತಿಳಿಸಿದರು.
ಇಂದು ನಾವಿರುವ ಪರಿಸ್ಥಿತಿಗೆ ನಾನು ಯಾರನ್ನೂ ಹೊಣೆ ಮಾಡುವುದಿಲ್ಲ. ದೂಷಿಸುವುದೂ ಇಲ್ಲ.ಇದಕ್ಕೆಲ್ಲಾ ನಾವೇ ಕಾರಣರು. ಮತದಾರರ ಮೇಲೆ ವಿಶ್ವಾಸವಿಟ್ಟು ಚುನಾವಣಾ ಅಖಾಡ ಪ್ರವೇಶಿಸಿದ್ದೇನೆ. ನನ್ನ ಸೋಲು-ಗೆಲುವು ಎರಡೂ ನಿಮ್ಮ ಕೈಯ್ಯಲ್ಲೇ ಇದೆ. ನೀವು ಆಶೀರ್ವದಿಸಿದರಷ್ಟೇ ನಾನು ಗೆಲುವು ಕಾಣಲು ಸಾಧ್ಯ. ನೀವೂ ನನ್ನ ಕೈಬಿಟ್ಟರೆ ನಮ್ಮ ಕುಟುಂಬದ ಹೋರಾಟ ಇಲ್ಲಿಗೇ ಅಂತ್ಯಗೊಳ್ಳುತ್ತದೆ. ಹಾಗಾಗಲು ಬಿಡಬೇಡಿ. ನನಗೆ ಶಕ್ತಿ ತುಂಬುವಂತೆ ಬೇಡಿದರು.
ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಮಾತನಾಡಿ,ಮಂಡ್ಯ ಕ್ಷೇತ್ರದಲ್ಲಿ ಹೊರಗಿನ ಕ್ಷೇತ್ರದವರನ್ನು ಆಯ್ಕೆ ಮಾಡುವ ಅಗತ್ಯ ನಮಗಿಲ್ಲ.ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಅದರಿಂದ ಜಿಲ್ಲೆಯೂ ಅಭಿವೃದ್ಧಿಯಾಗಲಿದೆ.ಅದಕ್ಕಾಗಿ ವಿಜಯಾನಂದ ಅವರಿಗೆ ಮತದಾರರು ಸಂಪೂರ್ಣವಾಗಿ ಬೆಂಬಲಿಸುವಂತೆ ಮನವಿ ಮಾಡಿದರು.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ಈ ಚುನಾವಣೆಯಲ್ಲಿ ನನಗಿಂತಲೂ ಹೆಚ್ಚಿನ ಮತಗಳನ್ನು ಕೊಟ್ಟು ವಿಜಯಾನಂದ ಅವರನ್ನು ಗೆಲ್ಲಿಸಿ. ಅವರ ಬಳಿ ಹಣವಿಲ್ಲದಿರಬಹುದು.ಆದರೆ, ಹೃದಯ ಶ್ರೀಮಂತಿಕೆ ಇದೆ.ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಬೆಂಬಲಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.
ತಾ.ಪಂ. ಮಾಜಿ ಸದಸ್ಯ ಎಂ.ಜಿ. ತಿಮ್ಮೇಗೌಡ,ಮುದ್ದನಘಟ್ಟ ಮಹಾಲಿಂಗೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಟಿ.ಸಿ.ಶಂಕರೇಗೌಡ,ತಾಪಂ ಸದಸ್ಯ ರಘು, ಎಪಿಎಂಸಿ ಮಾಜಿ ಅಧ್ಯಕ್ಷ ಬೋರೇಗೌಡ,ಲೋಕೇಶ್, ವಿಶಾಲ್ರಘು ಸೇರಿದಂತೆ ಇತರರಿದ್ದರು.