ಪ್ರಸ್ತುತ ಕಾಲಘಟ್ಟದ ದಿನಗಳಲ್ಲಿ ರೈತರ ಆತ್ಮಹತ್ಯೆಗಳ ಪ್ರಕರಣ ಕಡಿಮೆಯಾಗಿದ್ದರೂ ಸಂಪೂರ್ಣ ನಿಂತಿಲ್ಲ, ವೈಜ್ಞಾನಿಕ ಬೆಲೆ ನೀಡಿದರೆ ರೈತರು ಸಂಪೃತ್ತರಾಗುತ್ತಾರೆ, ಸರ್ಕಾರಗಳು ಇದರತ್ತ ಗಮನ ಹರಿಸಬೇಕಿದೆ ಎಂದು ಕೃಷಿಕ ಲಯನ್ ಸಂಸ್ಥೆಯ ಆಡಳಿತ ಅಧಿಕಾರಿ ಕೆ ಟಿ ಹನುಮಂತು ಹೇಳಿದರು.
ಮಂಡ್ಯ ನಗರದ ಸ್ಟೇಡಿಯಂ ಬಳಿ ಇರುವ ಸಾವಯವ ಕೃಷಿಕರ ಮಳಿಗೆ ಆವರಣದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಕೃಷಿಕ ಲಯನ್ ಸಂಸ್ಥೆ ಇವರು ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಪ್ರಯುಕ್ತ ಸಾವಯವ ಕೃಷಿಕರಿಗೆ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಕೃಷಿಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೆಲವು ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಿಕೆಯಿಂದ ಭೂಮಿಯ ಫಲವತ್ತೆಯನ್ನೇ ನಾಶಮಾಡಿಕೊಳ್ಳುತ್ತಿದ್ದಾರೆ, ಇನ್ನೊಂದು ವರ್ಗ ನೈಕರ್ಗಿಕವಾಗಿ ಅಥವಾ ಸಾವಯವ ಕೃಷಿಯಲ್ಲಿ ಬೆಳೆಯನ್ನು ತೆಗೆದು ಒಳ್ಳೆಯ ಬದುಕನ್ನು ಕಟ್ಟಿಕೊಂಡು, ಜನರ ಆರೋಗ್ಯವನ್ನು ರಕ್ಷಿಸಲು ಸಂಕಲ್ಪಿಸಿರುವುದನ್ನು ನೋಡಬಹುದಾಗಿದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ. ನಾಗರಾಜು, ಇಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಉದ್ಯೋಗಸ್ಥರು ತಮ್ಮ ತಂದೆ ತಾಯಿಯನ್ನು ವೃದ್ದಾಶ್ರಮಗಳಿಗೆ ಕಳಿಸುತ್ತಿರುವುದು ಹೆಚ್ಚಾಗುತ್ತಿದೆ, ಆದರೆ ಯಾವ ಬಡ ರೈತ ಕುಟುಂಬವು ತಂದೆ-ತಾಯಿಯನ್ನು ಆಶ್ರಮಕ್ಕೆ ಕಳಿಸಿರುವ ನಿದರ್ಶನವಿಲ್ಲ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಾವಯವ ಕೃಷಿಕ ಮಲ್ಲಿಗೆರೆ ಎಂ ಟಿ ವೆಂಕಟೇಶ್, ಬೂದನೂರು ವಿಕಾಸ್, ಅಂಬರಹಳ್ಳಿ ರಾಜಣ್ಣ, ಚೆನ್ನಪ್ಪನದೊಡ್ಡಿ ದೇವೇಗೌಡ, ಹೊನ್ನನಾಯಕನಹಳ್ಳಿ ನಿರಂಜನ್ ಅವರನ್ನು ಗಣ್ಯರು ಅಭಿನಂದಿಸಿದರು. ನಂತರ ಸಾವಯವ ಕೃಷಿ-ಆದಾಯ ಗಳಿಕೆ, ಮಣ್ಣು ಆರೋಗ್ಯ, ಆರೋಗ್ಯಕರ ಆಹಾರ ಕುರಿತು ಸಂವಾದ ನಡೆಯಿತು.
ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿಕ ಅನಂತರಾವ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್, ಭಾರತ ಸೇವಾದಳದ ಸಂತೋಷ್ , ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಮನ್ಮುಲ್ ನಾಮಿನಿ ನಿರ್ದೇಶಕಿ ಸುಜಾತ ಕೃಷ್ಣ, ಗಾಯಕರಾದ ಬಸವರಾಜು, ನೇತ್ರಾವತಿ ಮತ್ತಿತರರಿದ್ದರು.