ಕೆರೆ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಮದ್ದೂರಿನ ಸಾದೊಳಲು ಗ್ರಾಮದಲ್ಲಿ ಸಚಿವ ಚಲುವರಾಯಸ್ವಾಮಿ ಅವರು ಮಾತನಾಡಿ, ಅದು ಬೇರೆ ಭೂಮಿ ಮಾಲೀಕನಿಂದ ಖರೀದಿ ಆಗಿರುವ ಜಾಗವಾಗಿದೆ, ಅದರ ಬಗ್ಗೆ ಆರೋಪ ಮಾಡುವುದಿರಲಿ, ಮೊದಲು ಬಿಡದಿಯಲ್ಲಿ ಎಷ್ಟು ಒತ್ತುವರಿಯಾಗಿದೆ ಅಂತ ಕುಮಾರಸ್ವಾಮಿ ಕ್ಲಾರಿಟಿ ಕೊಡಲಿ ಎಂದು ತಿರುಗೇಟು ನೀಡಿದರು.
ಏಜೆನ್ಸಿ ಬಿಟ್ಟು ಹುಡುಕಿಸುತ್ತಿದ್ದಾರೆ
ನಂದು ಜಮೀನು ಎಲ್ಲೇಲ್ಲಿ ಇದೆ ಎಂದು ಏಜೆನ್ಸಿ ಬಿಟ್ಟು ಹುಡುಕಿಸುತ್ತಿದ್ದಾರೆ. ಪಾಪ ಅವರಿಗೆ ನನ್ನ ಹಾಗೂ ನಮ್ಮ ಸರ್ಕಾರವನ್ನು ಸಹಿಸಲು ಆಗುತ್ತಿಲ್ಲ. ನನಗೂ ಅವರ ವೇದನೆ ನೋಡಿ ಅಯ್ಯೋ ಅನ್ನಿಸುತ್ತದೆ.
ಬಾಯಿ ಬಂದ ಹಾಗೆ ಎಲ್ಲರ ಬಗ್ಗೆ ಲಘುವಾಗಿ ಮಾತಾಡುತ್ತಾರೆ. ಸಿಎಂ ಆದವರು ದೇಶ ಆಳಿದ ಕುಟುಂಬದವರು ಮಾತನ್ನು ಇತಿಮಿತಿಯಲ್ಲಿ ಹಾಡಬೇಕು. ಅವರ ಬಗ್ಗೆ ಮಾತಾಡಿ ನಾನು ನನ್ನ ಸಂಸ್ಕಾರ ಹಾಗೂ ನಾಲಿಗೆ ಹಾಳುಮಾಡಿಕೊಳ್ಳಲು ಆಗಲ್ಲ ಎಂದು ಪ್ರತಿಕ್ರಿಯಿಸಿದರು.
ನೀರು ಇದ್ದರೆ ತಾನೇ ಬಿಡೋಕೆ ಸಾಧ್ಯ
ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಆದೇಶ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಮಿಟಿ ಹಾಗೂ ಲೀಗಲ್ ಟೀಂ ಜೊತೆ ಸಂಬಂಧ ಪಟ್ಟ ಸಚಿವರು ಮಾತನಾಡಿದ್ದಾರೆ. ನೀರು ಇದ್ದರೆ ತಾನೇ ಬಿಡೋಕೆ ಸಾಧ್ಯ. ನಮ್ಮ ಪರಿಸ್ಥಿತಿ ಏನು ಇದೆ ಅದನ್ನು ನೋಡಬೇಕಿದೆ. ನಮ್ಮಲ್ಲಿ ನೀರು ಲಭ್ಯ ಇದ್ರೆ ಹಿಡಿದು ಇಟ್ಟುಕೊಳ್ಳಲು ಆಗಲ್ಲ. ನಮ್ಮಲ್ಲಿ ಸದ್ಯ ನೀರು ಲಭ್ಯವಿಲ್ಲ. ಹೀಗಾಗಲೇ ಬೆಳೆಗೆ ನೀರು ಕೊಟ್ಟಿದ್ದೇವೆ.
ಈ ಇರುವುದು ಕುಡಿಯುವ ನೀರಿಗೆ ಮಾತ್ರ. ಲೀಗಲ್ ಟೀಂ ಮೂಲಕ ಎರಡು ಕಮಿಟಿಗೆ ತಿಳಿಸಿದ್ದೇವೆ ಎಂದರು.
ಡಿ.ಕೆ.ಶಿವಕುಮಾರ್ ಸಿಬಿಐ ಕೇಸ್ ಸರ್ಕಾರ ವಾಪಸ್ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸರ್ಕಾರದ ತೀರ್ಮಾನವೆ ಅಂತಿಮ ತೀರ್ಮಾನ. ಕೋರ್ಟ್ನಲ್ಲಿ ಆ ಬಗ್ಗೆ ಎರಡು ಮೂರು ಹಂತದಲ್ಲಿ ತನಿಖೆ ಆಗ್ತಾ ಇದೆ. ಇದನ್ನು ಕಳೆದ ಸರ್ಕಾರ ಅಡಿಶನಲ್ ಆಗಿ ಸಿಬಿಐಗೆ ಕೊಟ್ಟಿತ್ತು. ಲೀಗಲ್ ಸಮಸ್ಯೆ ಇರುವ ಕಾರಣ ವಾಪಸ್ಸು ತೆಗೆದುಕೊಳ್ಳಲಾಗಿದೆ ಎಂದರು.
ಕ್ಯಾಬಿನೆಟ್ನಲ್ಲಿ ಪ್ರಸ್ತಾಪ ಮಾಡ್ತೀವಿ
2013ರಲ್ಲಿಯೇ ಜಾತಿಗಣತಿಗೆ ಆದೇಶವಾಗಿದೆ. ಇಡೀ ದೇಶದಲ್ಲಿ ಜಾತಿಗಣತಿಯನ್ನು ಮಾಡಲು ಸರ್ಕಾರ ಮುಂದಾಗಿದೆ. ನಮ್ಮ ಪಕ್ಷವೂ ಎಐಸಿಸಿಯಿಂದ ಮಾಡಬೇಕೆಂದು ಅಂದುಕೊಂಡಿದೆ. ಕೆಲವು ಸಮಾಜದವರು ಮನೆಮನೆಗೆ ಹೋಗಿಲ್ಲ ಅಂದ್ರು. ನಮ್ಮ ಸಮಾಜದವರು ನಮ್ಮನ್ನು ಕರೆಸಿದ್ರು. ನಮ್ಮ ಸ್ವಾಮೀಜಿಗಳು ಅದರ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಅದನ್ನು ನಮ್ಮ ಕ್ಯಾಬಿನೆಟ್ನಲ್ಲಿ ಪ್ರಸ್ತಾಪ ಮಾಡ್ತೀವಿ. ಇದನ್ನು ಸಿಎಂ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಜೆಡಿಎಸ್ ಅವರನ್ನು ಬಿಟ್ಟು ಸ್ವಾಮೀಜಿಯವರ ಸಭೆಗೆ ಎಲ್ಲರೂ ಬಂದಿದ್ದರು ಎಂದರು.
ಯಾರನ್ನು ನಿಲ್ಲಿಸುತ್ತಾರೆ ನಿಲ್ಲಿಸಲಿ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷದ ಅಭ್ಯರ್ಥಿನ್ನು ಅವರೆ ಆಯ್ಕೆ ಮಾಡಬೇಕು. ಯಾರನ್ನು ನಿಲ್ಲಿಸುತ್ತಾರೆ ನಿಲ್ಲಿಸಲಿ ಚುನಾವಣೆ ನಡೆಯುತ್ತೆ,
ಜೆಡಿಎಸ್ ಬಿಜೆಪಿ ಒಂದಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಫೈಟ್ ಇರೋ ಕಾರಣ ಜೆಡಿಎಸ್ಗೆ ಬಿಟ್ಟುಕೊಡಬಹುದು. ನನ್ನ ಪತ್ನಿಯನ್ನು ಅಭ್ಯರ್ಥಿ ಮಾಡಲು ಆಲೋಚನೆ ಇಲ್ಲ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಪ್ರಸ್ತಾವನೆ ಮಾಡಿಲ್ಲ. ನಮ್ಮ ಪಕ್ಷದ ಸೂಕ್ತ ಅಭ್ಯರ್ಥಿಯನ್ನು ನಾವು ಹಾಕುತ್ತೇವೆ ಎಂದರು.