ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನರಹಿತರಿಗೆ ಗುರುತಿಸಿರುವ ಭೂಮಿ ಮಂಜೂರು ಮಾಡಲು ದಿಕ್ಕು ತಪ್ಪಿಸುತ್ತಿರುವ ಗ್ರಾಮ ಲೆಕ್ಕಿಗರನ್ನು ಕೆಲಸದಿಂದ ವಜಾಗೊಳಿಸುವಂತೆ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ,ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 130 ನಿವೇಶನ ರಹಿತರಿಗೆ ನಿವೇಶನ ನೀಡಲು ಅಗತ್ಯ ಸರ್ಕಾರಿ ಭೂಮಿ ಗುರುತಿಸಿ, ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿರುವುದು ಸರಿಯಷ್ಟೇ.
ಈಗಾಗಲೇ ನಿವೇಶನರಹಿತರಿಗೆ ಬೂದನೂರು ಸರ್ವೆ ನಂ.190/ಪಿ10ರಲ್ಲಿ 2 ಎಕರೆ ಭೂಮಿ ಗುರುತಿಸಿದೆ. ತಹಶೀಲ್ದಾರ್/ಉಪ ವಿಭಾಗಾಧಿಕಾರಿಗೆ ಗ್ರಾಮ ಲೆಕ್ಕಿಗರು ತಪ್ಪು ಮಾಹಿತಿ ನೀಡಿ ಸದರಿ ಭೂಮಿ ಬಡವರಿಗೆ ಸಿಗದಂತೆ ಕೆಲ ಪ್ರಭಾವಿಗಳ ಆಮಿಷಕ್ಕೆ ಒಳಗಾಗಿ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ತಮ್ಮ ನೇತೃತ್ವದಲ್ಲಿ ವಸ್ತುನಿಷ್ಠ ವರದಿ ಪರಿಶೀಲಿಸಿ ಬಡ, ದಲಿತ ಕುಟುಂಬಗಳಿಗೆ ನ್ಯಾಯ ದೊರಕಿಸಲು ಮನವಿ ಮಾಡುತ್ತೇವೆ ಎಂದರು.
ಸರ್ಕಾರಿ ಭೂಮಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಗ್ರಾಮ ಲೆಕ್ಕಿಗ(ವಿಎ)ರನ್ನು ಸೇವೆಯಿಂದ ವಜಾಗೊಳಿಸಬೇಕು.ಬೂದನೂರು ಗ್ರಾಮದ ಸರ್ವೇ ನಂಬರ್ 190ರಲ್ಲಿ ಭೂಮಿಗಳ ವಸ್ತುನಿಷ್ಠ ಮಾಹಿತಿ ನೀಡಬೇಕು.ಬೂದನೂರು ಗ್ರಾಮದಲ್ಲಿ ಕಳೆದ 2 ವರ್ಷದಿಂದ ಮಾಡಿರುವ 3 ಗುಂಟೆ- 4 ಗುಂಟೆ ಖಾತೆ ಬದಲಾವಣೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ಬೂದನೂರು ಗ್ರಾಮದ ಸರ್ಕಾರಿ ಭೂಮಿಗಳ ಸಮಗ್ರ ವರದಿ/ಮಾಹಿತಿ ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಸಮಿತಿಯ ಬೂದನೂರು ಸತೀಶ್ ಮತ್ತಿತರರಿದ್ದರು.