ಪ್ರಾಥಮಿಕ ಮತ್ತು ಪ್ರೌಢಶಾಲಾ ಮಳವಳ್ಳಿ ತಾಲ್ಲೂಕು ಘಟಕದ ವತಿಯಿಂದ ಅತಿಥಿ ಶಿಕ್ಷಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಅತಿಥಿ ಶಿಕ್ಷಕರು ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ಪತ್ರ ಚಳವಳಿ ನಡೆಸಿದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಇಂದಿನ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಹಲವಾರು ಬಾರಿ ಕರ್ನಾಟಕ ರಾಜ್ಯಾದ್ಯಂತ ಶಾಸಕರಿಗೆ, ಸಚಿವರಿಗೆ, ವಿಧಾನ ಪರಿಷತ್ ಸದಸ್ಯರಿಗೆ ಹಲವಾರು ಬಾರಿ ಮನವಿ ಮಾಡಿದ್ದು, ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೆವು, ಶಿಕ್ಷಣ ಇಲಾಖೆ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಅನುಗುಣವಾಗಿ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ ಸಚಿವರು ಸಮಂಜಸವಲ್ಲದ ಉತ್ತರವನ್ನು ನೀಡಿದ್ದಾರೆ. ಇದರಿಂದ ರಾಜ್ಯದ 42,000 ಸಮಸ್ತ ಅತಿಥಿ ಶಿಕ್ಷಕರಿಗೆ ಸಾಮಾಜಿಕ ನ್ಯಾಯ ಇಲ್ಲದಂತಾಗಿದೆ. ಅತಿಥಿ ಶಿಕ್ಷಕರ ಬದುಕು ಚಿಂತಾಜನಕವಾಗಿದೆ ಎಂದು ದೂರಿದರು.
ಕರ್ನಾಟಕ ರಾಜ್ಯದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಒಂದೇ ಆಗಿದ್ದರೂ ವಸತಿ ಶಾಲೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಶಾಲೆಗಳಿಗೂ ಗೌರವಧನದಲ್ಲಿ ಸೇವಾ ಭದ್ರತೆಯಲ್ಲಿ ತಾರತಮ್ಯ ಇದೆ, ರಾಜ್ಯದಲ್ಲಿರುವ ವಸತಿ ಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರಿಗೆ ತಿಂಗಳಿಗೆ 18,000 ಗೌರವಧನ, ವರ್ಷಕ್ಕೆ ಶೇಕಡಾ 5 ರಷ್ಟು ಕೃಪಾಂಕ ನೀಡುವುದರ ಜೊತೆಗೆ ಸೇವಾ ದೃಢೀಕರಣ ಪತ್ರವನ್ನು ಸಹ ನೀಡಲಾಗುತ್ತಿದೆ. ಇದಕ್ಕೆ ತದ್ವಿರುದ್ದವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿ ಕೆಲಸ ಮಾಡುವ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ತಿಂಗಳಿಗೆ 10,000 ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10.500 ರೂ ಗೌರವ ಧನವನ್ನು ಮೂರು ತಿಂಗಳಿಗೆ ಇಲ್ಲವೆ ಆರು ತಿಂಗಳಿಗೆ ಒಮ್ಮೆ ನೀಡಲಾಗುತ್ತಿದೆ ಎಂದು ದೂರಿದರು.
ಇಂದಿನ ಸಮಾಜದಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ, ನಾವು ಬದುಕುವುದಾದರೂ ಹೇಗೆ ? ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಚುನಾವಣಾ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವಂತೆ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಅಧ್ಯಕ್ಷ ಮಹೇಶ್ ಕುಮಾರ್ ಬಿ.ಎಸ್,
ಉಪಾಧ್ಯಕ್ಷ ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಹ ಕಾರ್ಯದರ್ಶಿ ಶರತ್ ಕುಮಾರ್,
ಖಜಾಂಚಿ ಪುಟ್ಟರಾಜು ಹಾಗೂ ಹನುಮಯ್ಯ, ಮಹದೇವು, ಬಿಲ್ಲಯ್ಯ ಸ್ವಾಮಿ ರಮ್ಯಾ, ರಾಧಾ, ಸ್ವಾಮಿ ಇನ್ನಿತರರೂ ಹಾಜರಿದ್ದರು.