ಮಂಡ್ಯ ಹೊರವಲಯದ ಬೆಂಗಳೂರು- ಮೈಸೂರು ಮುಖ್ಯರಸ್ತೆಯ ಪಕ್ಕದ ಶ್ರೀನಿವಾಸಪುರ ಗೇಟ್ ಹತ್ತಿರದ ‘ಸತ್ವ ಕಾವೇರಿ ಸಿರಿ’ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಿರುವ ಚಿನ್ನಮಸ್ತ ಪ್ರಾಪರ್ಟೀಸ್ ರವರ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವಿಳಂಬವಾಗಿರುವುದರ ವಿರುದ್ದ ನೊಂದ ಗ್ರಾಹಕರು, ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಕ್ಷಿದಾರ ಹಾಗೂ ವಕೀಲರು ಆಗಿರುವ ಎಂ.ಸಿ ರಾಜಗೋಪಾಲ್ ಅವರ ಮೂಲಕ ಹಲವು ನೊಂದ ಗ್ರಾಹಕರು, ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲು ತಮ್ಮನ್ನು ಸಂಪರ್ಕಿಸಿದ್ದಾರೆಂದು ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಅವರು ನುಡಿಕರ್ನಾಟಕ.ಕಾಂ ಗೆ ಮಾಹಿತಿ ನೀಡಿದ್ದಾರೆ.
ನಿವೇಶನಗಳಿಗಾಗಿ ಲಕ್ಷಾಂತರ ರೂ. ಮುಂಗಡ ಹಣ ನೀಡಿ, ತಿಂಗಳುಗಟ್ಟಲೆ ಆದರೂ ನಿವೇಶನ ಮಂಜೂರು ಮಾಡದೇ ಅಥವಾ ಕ್ರಯ ಮಾಡಿಕೊಡದೇ ಎಷ್ಟು ಅಲೆದರೂ, ನೋಟಿಸು ನೀಡಿದರೂ ಪ್ರತಿಕ್ರಿಯಿಸದೇ ಇರುವುದರಿಂದ ನ್ಯಾಯವಾದಿ ಮತ್ತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷರಾದ ಬಿಟಿ ವಿಶ್ವನಾಥ್ ಅವರ ಮೂಲಕ ಗ್ರಾಹಕರು, ಪ್ರಕರಣ ದಾಖಲಿಸಿದ್ದಾರೆ.
ವಾಗ್ದಾನವಿತ್ತ ಸಮಯದಲ್ಲಿ ತಮ್ಮ ಗ್ರಾಹಕರಿಗೆ ಚಿನ್ನಮಸ್ತಾ ಪ್ರಾಪರ್ಟೀಸ್ ನಿವೇಶನ ನೀಡದೇ ಸತಾಯಿಸಿದೆ ಆದ್ದರಿಂದ ಗ್ರಾಹಕರು ನೀಡಿದ್ದ ಮುಂಗಡ ಹಣವನ್ನು ಬಡ್ಡಿ ಸಹಿತ ಹಿಂದಿರುಗಿಸಬೇಕು ಮತ್ತು ಸದರಿ ಪ್ರವರ್ತಕರು ನಿವೇಶನ ನೀಡಲು ತಡ ಮಾಡಿ ಸೇವಾ ನ್ಯೂನ್ಯತೆ ಎಸಗಿರುವುದರಿಂದ, ವಿನಾಕಾರಣ ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡಿರುವುದರಿಂದ, ತಮ್ಮ ಗ್ರಾಹಕರಿಗೆ ಅವರ ಮುಂಗಡ ಹಣದ ಜೊತೆಗೆ ಪರಿಹಾರವಾಗಿ 2 ಲಕ್ಷ ರೂಗಳನ್ನು ಪಾವತಿಸಬೇಕೆಂದು ಮನವಿ ಮಾಡಲಾಗಿದೆ.