ಜೆಡಿಎಸ್ ಪಕ್ಷದಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಏ.17 ಅಥವಾ 19ರಂದು ನಾಮಪತ್ರ ಸಲ್ಲಿಸುತ್ತೇನೆಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ಜೆಡಿಎಸ್ ನಗರ ಘಟಕ ಆಯೋಜಿಸಿದ್ದ ಜೆಡಿಎಸ್ ಬೆಂಬಲಿತ ನಗರಸಭೆ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಅವರು ಮಾತನಾಡಿದರು.
ಜೆಡಿಎಸ್ ವರಿಷ್ಟರ ನಿರ್ಣಯದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ.ಸ್ಪರ್ಧೆ ಬಗ್ಗೆ ವರಿಷ್ಠರ ಸಭೆಯಲ್ಲಿ ಎಲ್ಲಾ ತೀರ್ಮಾನವಾಗಿದೆ. ಏ.17 ಅಥವಾ 19ರಂದು ನಾಮಪತ್ರ ಸಲ್ಲಿಸುವುದು ಖಚಿತ, ಜನಾಶೀರ್ವಾದದಿಂದ ಜೆಡಿಎಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜೆಡಿಎಸ್ನ ಎಲ್ಲಾ ನಾಯಕರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಒಗ್ಗೂಡಿ ನಾಮಪತ್ರ ಸಲ್ಲಿಸುತ್ತೇವೆ,ಅಲ್ಲದೆ ರಾಜ್ಯಮಟ್ಟದ ವರಿಷ್ಠರನ್ನು ಆಹ್ವಾನಿಸುತ್ತೇವೆ, ಬಳಿಕ ಮತದಾರರ ಬಳಿಗೆ ತೆರಳಿ ಮತಯಾಚನೆ ಮಾಡುತ್ತೇವೆ ಎಂದು ನುಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿತ ಅಭ್ಯರ್ಥಿ ಎಚ್.ಎನ್ ಯೋಗೇಶ್ ಮಾತನಾಡಿ, ಜೆಡಿಎಸ್ ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ನನ್ನ ಹೆಸರು ಸೇರಿದಂತೆ ಮನ್ಮುಲ್ ಅಧ್ಯಕ್ಷ ರಾಮಚಂದ್ರು, ನಗರಸಭೆ ಅಧ್ಯಕ್ಷ ಮಂಜು, ಜಿ.ಪಂ ಮಾಜಿ ಸದಸ್ಯ ವಿಜಯ ಆನಂದ್ ಅವರಿದ್ದಾರೆ. ವರಿಷ್ಠರ ತೀರ್ಮಾನದಿಂದ ಎಲ್ಲವೂ ಬಗೆಹರಿದಿದೆ, ಮುಂದೆ ಶಾಸಕರ ತೀರ್ಮಾನದಂತೆ ಎಲ್ಲವೂ ನಡೆಯಲಿದೆ ಎಂದರು.
ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಗ್ಗೆ ಸೃಷ್ಠಿಸುತ್ತಿರುವ ಗೊಂದಲಗಳ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.ಮುಂದಿನ ದಿನಗಳಲ್ಲಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಚಾರ ಕುರಿತು ಇಂದು ಚರ್ಚೆ ನಡೆಸಿ, ನಗರಸಭೆ ವ್ಯಾಪ್ತಿಯಲ್ಲಿ ಬೆಂಬಲ ಕೋರಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಶಾಸಕ ಎಂ.ಶ್ರೀನಿವಾಸ್ ಅವರ ಜೊತೆಯಲ್ಲಿ ನಾನೂ ಕೂಡ ನಾಮಪತ್ರ ಸಲ್ಲಿಸಲಿದ್ದು, ನಾಮಪತ್ರ ಹಿಂಪಡೆಯುವ ದಿನ ಶಾಸಕರ ಮಾತಿನಂತೆ ನಾಮಪತ್ರ ವಾಪಸ್ ಪಡೆಯುತ್ತೇವೆ. ಮುಂಜಾಗ್ರತೆಯ ದೃಷ್ಟಿಯಿಂದ ನಾನೂ ಕೂಡ ನಾಮಪತ್ರ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷ ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ನಗರಸಭೆ ಸದಸ್ಯೆ ಮಂಜುಳಾ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಗೌರೀಶ್, ಮುಜಾಹಿದ್, ಸಾತನೂರು ಜಯರಾಂ ಮತ್ತಿತರರಿದ್ದರು.