ರೈತಸಂಘ ಬೆಂಬಲಿತ ಸರ್ವೊದಯ ಕರ್ನಾಟಕ ಪಕ್ಷದ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಎಸ್.ಸಿ.ಮಧುಚಂದನ್ ಬುಧವಾರ ತಮ್ಮ ಬೆಂಬಲಿಗರೊಂದಿಗೆ ಮಂಡ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮಂಡ್ಯನಗರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಂಡ್ಯದಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಸಾಹಿತಿ ದೇವನೂರು ಮಹದೇವ ಅವರು, ಮಧುಚಂದನ್ ಒಬ್ಬ ರೈತ ಮುಖಂಡರಾಗಿ ಮಂಡ್ಯದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. 120 ಕ್ಕೂ ಹೆಚ್ಚು ರೈತಕೂಟಗಳನ್ನು ರಚನೆ ಮಾಡಿ, ಆ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿಸಲು ಶ್ರಮಿಸುತ್ತಿದ್ದಾರೆ. ಅಲ್ಲದೇ ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯನ್ನು ಸ್ಥಾಪಿಸಿ ಸಾವಯವ ಪದಾರ್ಥಗಳಿಗೆ ಮಾರುಕಟ್ಟೆಯನ್ನು ಒದಗಿಸಿಕೊಟ್ಟಿದ್ದಾರೆ. ಇಷ್ಟೆ ಅಲ್ಲದೇ ದಾನಿಗಳಿಂದ ನಾಟಿ ಹಸುಗಳನ್ನು ಪಡೆದು ಬಡವರಿಗೆ ಅವುಗಳನ್ನು ನೀಡುವ ಮೂಲಕ ರೈತರನ್ನು ಮೇಲೆತ್ತಲು ಶ್ರಮಿಸುತ್ತಿದ್ದಾರೆ. ಇಂತಹವರನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಈ ಹಿಂದೆ ಮಂಡ್ಯ ಜಿಲ್ಲೆಯಿಂದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ವಿಧಾನಸಭೆ ಪ್ರವೇಶ ಮಾಡಿದ್ದರು. ಈಗ ನಾವು ಅವರನ್ನ ಕಳೆದುಕೊಂಡಿದ್ದೇವೆ. ಆದ್ದರಿಂದ ರೈತಪರವಾಗಿ ಧ್ವನಿ ಎತ್ತುವ, ರೈತರ ಸಂಕಷ್ಟಗಳನ್ನು ಸರ್ಕಾರಕ್ಕೆ ತಿಳಿಸುವ ನಾಯಕನ ಅಗತ್ಯವಿದೆ. ಹಾಗಾಗಿ ಮಧು ಚಂದನ್ ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಧುಚಂದನ್ ಮಾತನಾಡಿ, ಇನ್ನು ಮುಂದೆ ನಮ್ಮ ಜೀವನ ನಿಮ್ಮ ಜೀವನ. 25 ವರ್ಷಗಳಿಂದ ಅಭಿವೃದ್ಧಿಯಿಂದ ಹಿಂದುಳಿದಿರುವ ಮಂಡ್ಯವನ್ನು ಸರಿಪಡಿಸುವುದಕ್ಕೊಸ್ಕರ ರಾಜಕಾರಣಕ್ಕೆ ಬಂದಿದ್ದೇನೆ. ನನಗೆ ಗಾಡ್ ಫಾದರ್ ಗಳು ಇಲ್ಲ, ನನಗೆ ನೀವೇ ಅಪ್ಪ ಅಮ್ಮ ಆಗಿದ್ದೀರಿ, ನನ್ನನ್ನು ಆಶೀರ್ವಾದಿಸಿ ಎಂದು ಮನವಿ ಮಾಡಿದರು.