ಭಾರತೀಯ ಬೌದ್ಧ ಮಹಾಸಭಾ ಮಳವಳ್ಳಿ ತಾಲ್ಲೂಕು ಯುವ ಘಟಕ ವತಿಯಿಂದ 2568ನೇ ವೈಶಾಖ ಶುಕ್ಲ ಬುದ್ಧ ಪೂರ್ಣಿಮೆ ಪ್ರಯುಕ್ತ ಮಳವಳ್ಳಿ ಪಟ್ಟಣದಲ್ಲಿ ಬುದ್ದ ಪುತ್ಥಳಿಯೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ತಾಲ್ಲೂಕು ಅಧ್ಯಕ್ಷ ಎಂ.ಪಿ ಮೋಹನ್ಕುಮಾರ್ ತಿಳಿಸಿದರು.
ಮಳವಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಮಳವಳ್ಳಿ ಪಟ್ಟಣದ ಬಿ. ಆರ್. ಅಂಬೇಡ್ಕರ್ ಭವನದಿಂದ ಪ್ರವಾಸಿ ಮಂದಿರದ ಮುಂಭಾಗದ ಬಿ.ಆರ್. ಅಂಬೇಡ್ಕರ್ ಪುತ್ಥಳಿವರೆಗೆ ಬುದ್ದ ಪುತ್ಥಳಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬುದ್ದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮೆರವಣಿಗೆ ನಂತರ ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ ಬಳಿ ಇರುವ ಮಿಲಿಂದ ಬುದ್ಧ ವಿಹಾರಕ್ಕೆ ತೆರಳಿ ಬುದ್ಧ ವಂದನೆ ಸಲ್ಲಿಸಲಾಗುವುದು, ಕಾರ್ಯಕ್ರಮದಲ್ಲಿ ಭಂತೇಜಿ, ಬೌದ್ದಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಬಿ. ಸೋಮಶೇಖರ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆಂದರು.
ಸಿದ್ದಾರ್ಥ ಗೌತಮನ ಹುಟ್ಟು, ಜ್ಞಾನೋದಯ ಮತ್ತು ಮಹಾ ಪರಿನಿರ್ವಾಣ ಈ ಮೂರು ಘಟನೆಗಳು ಮೇ ತಿಂಗಳ ವೈಶಾಖ ಪೂರ್ಣಿಮೆಯ ದಿನದಂದು ಸಂಭವಿಸಿರುವುದು ವಿಶೇಷವಾಗಿದ್ದು, ವಿಶ್ವ ಶಾಂತಿಗಾಗಿ, ಮಾನವ ಕೋಟಿ ವಿಮೋಚನೆಗಾಗಿ, ಪರಿಸರ ಉಳಿವು ರಕ್ಷಣೆಗಾಗಿ, ಮಳೆ ಬೆಳೆಗಾಗಿ ಈ ಪವಿತ್ರ 2568ನೇ ವೈಶಾಖ ಶುಕ್ಲ ಬುದ್ಧ ಪೂರ್ಣಿಮೆ ಉತ್ಸವ, ಬುದ್ಧ ಪುತ್ಥಳಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬುದ್ದರ ಬೋಧನೆಯಿಂದ ಸಕಲ ಜೀವಿಗಳು ಜಾಗೃತರಾಗಲಿ ಹಾಗೂ ಅದನ್ನು ಜಗತ್ತಿಗೆ ತಿಳಿಸುವ ಆಶಯದೊಂದಿಗೆ ಮಳವಳ್ಳಿ ತಾಲ್ಲೂಕಿನ ಬುದ್ದರ ಅನುಯಾಯಿಗಳು ಈ ಜಾಗತಿಕ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಲಾಗುತಿದ್ದು, ತಾಲ್ಲೂಕಿನ ವಿವಿಧ ಜನಪರ ಸಂಘಟನೆಗಳ ಮುಖಂಡರು, ಬುದ್ದ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ರವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಜೆ ರಘುರಾಜ್, ಲೆಕ್ಕಪರಿಶೋಧಕ ಆರ್ ಚಂದ್ರಶೇಖರ್, ಸಂಘಟನೆ ಕಾಯ೯ದಶಿ೯ ಕಿರಣ್ ಕಲ್ಲಾರೇಪುರ, ಖಜಾಂಚಿ ಅರುಣ್, ಜಿಲ್ಲಾ ಸಮಿತಿ ಸದಸ್ಯ ಯತೀಶ್ , ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.