ಮಂಡ್ಯ ಜಿಲ್ಲೆ ಜೆಡಿಎಸ್ನ ಭದ್ರಕೋಟೆಯಾಗಿದೆ, ಜಿಲ್ಲೆಯಲ್ಲಿ ಕೆಲವು ಏರುಪೇರು ಆಗಿರಬಹುದು. ಇದಕ್ಕೆ ಜನರು ಕಾರಣರಲ್ಲ. ವಿರೋಧ ಪಕ್ಷದ ನಾಯಕರು ಮುಗಿಸಿದೋ ಎನ್ನುತ್ತಿದ್ದಾರೆ, ಕುತಂತ್ರದ ರಾಜಕಾರಣದಿಂದ ನಾವು ಕೆಲವು ಚುನಾವಣೆಯಲ್ಲಿ ಸೋತಿದ್ದೇವೆ ಅಷ್ಟೇ. ಆದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಂದ ನಾವು ಸೋತಿಲ್ಲ, ಜನರ ಬೆಂಬಲ ನಮಗೆ ಸದಾ ಇದೆ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್ ಅನ್ನು ಕೈ ಹಿಡಿಯುತ್ತಾರೆ.
ನಮ್ಮ ಪಕ್ಷದ ಕಾರ್ಯಕರ್ತರು, ಕೆಲ ನಾಯಕರಿಂದ ಸೋಲಾಗಿದೆ ಅಷ್ಟೇ. ಕೆಲವರ ಕುತಂತ್ರದಿಂದ ಸೋಲಾಗಿದೆ ಅಷ್ಟೇ. ಜನ ಅದಕ್ಕೆ ಈ ಬಾರಿ ತಕ್ಕ ಉತ್ತರ ಕೊಡ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಹಲವಾರು ಮಂದಿ ಮುಖ್ಯಮಂತ್ರಿ ಆಗಬೇಕೆಂದುಕೊಂಡಿದ್ದಾರೆ. ಮಂಡ್ಯ ಜನರು ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರ ಕೈಯನ್ನು ಮಂಡ್ಯ ಜನ ಹಿಡಿಯಲ್ಲ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ನನಗೆ ಮಂಡ್ಯ ಜನ ಸಫೋರ್ಟ್ ಮಾಡ್ತಾರೆ. ನಾನು ಸಿಎಂ ಆಗ್ತೀನಿ ಅಂತಾ ಮತ್ತೆ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೋ ಮಾತಾನಾಡುತ್ತಾರೆ ಎಂದು ನಾನು ಮಾತನಾಡಲು ಹೋಗಲ್ಲ. ಜಿಲ್ಲೆಯ ಜನರು ಗೌರವ ಅಭಿಮಾನ ಇಟ್ಟಿದ್ದಾರೆ. ನಾನು ಸಿಎಂ ಆಗಿದ್ದಾಗ ಮಂಡ್ಯಗೆ ಸಾಕಷ್ಟು ಯೋಜನೆ ತಂದಿದ್ದೆ.
ಅದನ್ನು ಬಿಜೆಪಿಯವರು ತಡೆ ಹಿಡಿದಿದ್ದಾರೆ. ಅದನ್ನು ತಡೆ ಹಿಡಿಯೋಕೆ ಚಲುವರಾಯಸ್ವಾಮಿ ಶ್ರಮ ಇದೆ ಎಂದು ಹೇಳಿದರು.
ನನ್ನ ಸಮ್ಮಿಶ್ರ ಸರ್ಕಾರ ಕೆಡವಲು ಇವರ ಚಿತಾವಣೆ ಎಷ್ಟಿದೆ ಅನ್ನೋದು ಗೊತ್ತು. ನನ್ನ ಬಜೆಟ್ ನ ಮಂಡ್ಯ ಜಿಲ್ಲೆ ಬಜೆಟ್ ಅಂತಾ ವ್ಯಂಗ್ಯವಾಡಿದ್ರು. ಕೊಟ್ಟ ಅನುದಾನವನ್ನ ಬೇರೆ ಕಡೆ ವರ್ಗಾಯಿಸಿದ್ರೆ ನನ್ನ ತಪ್ಪಾ ? ಬಿಜೆಪಿಯವರಿಗೆ ಜಿಲ್ಲೆಯಲ್ಲಿ ಮತ ಕೇಳುವ ಹಕ್ಕು ಇಲ್ಲ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪೈಪೋಟಿ ವಿಚಾರ. ಬಿಜೆಪಿಯವರ ಪೈಪೋಟಿ ಕೇವಲ ಹಣದಲ್ಲಿ ಮಾತ್ರ. ಕೆ.ಆರ್.ಪೇಟೆ ಉಪ ಚುನಾವಣೆ ಹೇಗೆ ನಡೀತು ಅಂತಾ ಎಲ್ಲರಿಗೂ ಗೊತ್ತು. ನಮ್ಮ ಸಣ್ಣಪುಟ್ಟ ತಪ್ಪಿನಿಂದ ಕೆ ಆರ್.ಪೇಟೆಯಲ್ಲಿ ಸೋಲಾಯಿತು. ಇಲ್ಲದಿದ್ದರೇ ನಮಗೆ ಸೋಲು ಆಗುತ್ತಿರಲಿಲ್ಲ. ಹಣದಿಂದ ಮಂಡ್ಯ ಜಿಲ್ಲೆಯಲ್ಲಿ ಗೆಲ್ಲಬಹುದು ಅಂತಿದ್ದಾರೆ ಅವ್ರು. ಈ ಬಾರಿ ಬಿಜೆಪಿಗೆ ಮಂಡ್ಯ ಜನರಿಂದ ತಕ್ಕ ಉತ್ತರ.
ಮಂಡ್ಯ ಜಿಲ್ಲೆಯನ್ನ ಕಡೆಗಣಿಸಿದ್ದು ಬಿಜೆಪಿ. ಅವರು ಯಾವ ಮುಖ ಒತ್ತು ಮತ ಕೇಳ್ತಾರೋ ಗೊತ್ತಿಲ್ಲ.
ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾವ ರೈತರು ನೆರವಾಗಲಿಲ್ಲ. ನಾನು 200 ರೈತರ ಮನೆಗೆ ಹೋಗಿ ಸಹಾಯ ಮಾಡಿದ್ದೇನೆ.