ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ, ಪಕ್ಷದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಇಬ್ಬರು ಮಾಜಿ ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿಸಿ ಗೌರಿಶಂಕರ್ ಮತ್ತು ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಅವರು ಜೆಡಿಎಸ್ಗೆ ಗುಡ್ಬೈ ಹೇಳಲಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್ ಸೇರಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಈ ಇಬ್ಬರೂ ಸೇರ್ಪಡೆಯಾದರೆ ಕಾಂಗ್ರೆಸ್ಗೆ ಪ್ರಬಲ ನೆಲೆ ಇಲ್ಲದಿದ್ದ ಕ್ಷೇತ್ರಗಳಲ್ಲಿ ಬಲ ಬಂದಂತಾಗಲಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಹಲವಾರು ಹಾಲಿ-ಮಾಜಿ ಶಾಸಕರು ಕಾಂಗ್ರೆಸ್ನತ್ತ ಮುಖಮಾಡಿದ್ದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಿದ್ದರು. ಅದೇ ರೀತಿಯಲ್ಲಿ ಕೆ.ಆರ್ ಪೇಟೆಯಲ್ಲಿಯೂ ಜೆಡಿಎಸ್ ಮುಖಂಡ ದೇವರಾಜ್ ಅವರು ಕಾಂಗ್ರೆಸ್ ಸೇರಿ, ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇಂತಹ ಪ್ರಹಸನಗಳ ನಡುವೆಯೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ, ಜೆಡಿಎಸ್ ತೊರೆಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದ ಡಿಸಿ ಗೌರಿಶಂಕರ್ ಅವರು ಕಳೆದ ಚುನಾವಣೆಯಲ್ಲಿ 4,594 ಮತಗಳ ಅಂತರದಿಂದ ಸೋತಿದ್ದರು. ಅದೇ ರೀತಿ, ಮಂಜುನಾಥ್ ಅವರು 9,194 ಸೋಲುಂಡಿದ್ದರು. 2018ರ ಚುನಾವಣೆಯಲ್ಲಿ ಮಂಜುನಾಥ್ ಅವರು ಬಿಜೆಪಿಯ ಮುನಿರಾಜು ವಿರುದ್ಧ ಸ್ಪರ್ಧಿಸಿ, ಗೆದ್ದಿದ್ದರು. 2023ರ ಚುನಾವಣೆಯಲ್ಲಿ ಮುನಿರಾಜು ವಿರುದ್ಧ ಸೋಲುಂಡಿದ್ದರು.
ಗೌರಿಶಂಕರ್ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಜುನಾಥ್ ಅವರೂ ಕೂಡ ಹಿಂದೆ ಕಾಂಗ್ರೆಸ್ನಲ್ಲಿಯೇ ಇದ್ದರು. ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲವೆಂದು ಜೆಡಿಎಸ್ ಸೇರಿದ್ದರು. ಈಗ ಬಿಜೆಪಿ ಜೊತೆಗಿನ ಮೈತ್ರಿ ವಿರೋಧಿಸಿ ಜೆಡಿಎಸ್ ತೊರೆದಿದ್ದಾರೆ. ಅವರಿಬ್ಬರೂ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.
ಈ ನಡುವೆ ಎಸ್.ಟಿ ಸೋಮಶೇಖರ್ ಕೂಡ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಂತಿದೆ. ಅವರೂ ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗಿವೆ.