ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ಕರ್ನಾಟಕದ ಹಿತ ಕಾಪಾಡದ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸರದಿ ಉಪವಾಸ 18ನೇ ದಿನವೂ ಮುಂದುವರೆಯಿತು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಮಂಡ್ಯ ಅರಕೇಶ್ವರ ನಗರದ ಸುಶೀಲ, ಗೋಪಾಲ ಪುರದ ಶಾಂತ, ದೊಡ್ಡ ಅರಸಿನಕೆರೆ ಪುಟ್ಟೇಗೌಡ, ಗಾಣದಾಳು ಚಂದ್ರ ಲಿಂಗು, ಎಚ್ ಕೂಡಿಹಳ್ಳಿ ಗ್ರಾಮದ ಭಾಗ್ಯ ಭಾಗಿಯಾಗಿದ್ದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರಿಗೆ ಆಳುವ ಸರ್ಕಾರಗಳು ದ್ರೋಹ ಮಾಡುತ್ತಿದ್ದು, ತಮಿಳುನಾಡಿಗೆ ನೀರು ಬಿಡಲು ಸರ್ಕಾರ ವಾಮ ಮಾರ್ಗ ಅನುಸರಿಸುತ್ತಿದೆ, ನಾಲೆಗಳ ಮೂಲಕ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದೆ ಎಂದು ಆರೋಪಿಸಿದರು.
ಕಾವೇರಿ ಚಳವಳಿ ನಾಳೆ ( ಬುಧವಾರ ) ಶತ ದಿನಕ್ಕೆ ಕಾಲಿಡುತ್ತಿದೆ.ಆ ಹಿನ್ನೆಲೆಯಲ್ಲಿ ಆಳುವ ಸರ್ಕಾರಗಳು, ಚನಾಯಿತ ಜನಪ್ರತಿನಿಧಿಗಳು, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ರೈತ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ. ಅಂಬುಜಮ್ಮ. ಇಂಡವಾಳು ಚಂದ್ರಶೇಖರ್. ಮುದ್ದೇಗೌಡ. ದಸಂಸ ಎಂ ವಿ. ಕೃಷ್ಣ,ಕನ್ನಡ ಸೇನೆ ಮಹಾಂತೇಶಪ್ಪ.ರಮ್ಮ. ಮಲ್ಲೇಶ್. ನಾಗೇಂದ್ರ. ಬೋರಲಿಂಗಯ್ಯ. ಕೃಷ್ಣ ಪ್ರಕಾಶ್ ಇತರರಿದ್ದರು.