ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಗ್ರಾಮದಲ್ಲಿ ಆತಂಕ ಮೂಡಿಸಿದೆ.
ಶೆಟ್ಟಹಳ್ಳಿ ಗ್ರಾಮದ ಶಿವಕುಮಾರ್ ಎಂಬುವವರು ಗ್ರಾಮದ ಹೊರಲಯದಲ್ಲಿ ಚಿರತೆ ಕಂಡು ಭಯಭೀತರಾಗಿ ಸ್ಥಳದಿಂದ ಪರಾರಿಯಾಗಿ ಗ್ರಾಮಸ್ಥರಿಗೆ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಗ್ರಾಮಸ್ಥರು ಸ್ಥಳೀಯ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದನ್ನು ವಿವರಿಸಿದ್ದಾರೆ. ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಗವಿಯಪ್ಪ ಅವರು ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ತಮ್ಮ ಸಹಾಯಕ ಅಧಿಕಾರಿ ರವಿ ಎಂಬುವವರನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಕಲೆಹಾಕಿಸಿದ್ದಾರೆ.
ಕಾಳಬೋರೇಗೌಡ ಎಂಬುವವರ ಕಬ್ಬಿನಗದ್ದೆಯಲ್ಲಿ ಚಿರತೆಯ ಹೆಜ್ಜೆಗುರುತು ಕಂಡುಬಂದಿದ್ದು, ಇದನ್ನು ಪರಿಶೀಲಿಸಿ ಇನ್ನೆರಡು ದಿನಗಳಲ್ಲೇ ಚಿರತೆ ಸೆರೆಗಾಗಿ ಬೋನು ಇಡುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಅಲ್ಲಿಯ ವರೆಗೆ ಜಮೀನಿನ ಬಳಿ ಒಬ್ಬರೆ ಯಾರೂ ಹೋಗದಂತೆ ಎಚ್ಚರ ವಹಿಸಬೇಕೆಂದು ಕರೆ ನೀಡಿದ್ದಾರೆ.
ಇದೇ ವೇಳೆ ಶೆಟ್ಟಹಳ್ಳಿ ಗ್ರಾ.ಪಂ ಸದಸ್ಯ ಸುಂದ್ರೇಶ್, ಎಸ್.ಪಿ.ಚೇತನ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.