“ದುಡ್ಡಿಗಾಗಿ, ಜೀವನಕ್ಕಾಗಿ ದೇಹ ಮಾರಿಕೊಂಡರೆ ಸೂಳೆಯರು ಅಂತಾರೆ, ಜಾಣಿಯರು ಅಂತಾರೆ, ಸೂಳೆ ಮಕ್ಕಳು ಅಂತಾರೆ, ವ್ಯಭಿಚಾರಿ ಅಂತ ಕರಿತಾರೆ. ಈ ಕಠೋರ ಪರಿಸ್ಥಿತಿಯಲ್ಲಿ ಆ 16 ಜನ ತಮ್ಮನ್ನ ತಾವು ಮಾರಿಕೊಂಡು ಹೋಗಿ ಬಿಜೆಪಿ ಸರ್ಕಾರ ರಚಿಸಿದ್ದಾರಲ್ಲ ಅವರಿಗೆ ಯಾವ ಪದಗಳಿಂದ ನಿಂದಿಸಲಿ” ಎಂದು ಲಿಂಗತ್ವ ಅಲ್ಪಸಂಖ್ಯಾತೆ ಅಕ್ಕೈ ಪದ್ಮಶಾಲಿ ಆಕ್ರೋಶ ಹೊರ ಹಾಕಿದರು.
ಜನ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. “ಪುರುಷರು ಗಂಡಸರಾಗಿ ಹುಟ್ಟಿರುವ ಒಂದೇ ಒಂದು ಕಾರಣಕ್ಕೆ ವಿಶ್ವ ತಿರುಗುವ ಅವಕಾಶ ಅವರಿಗಿದೆ. ಇದಕ್ಕೆ ನನ್ನ ವಿರೋಧವಿದೆ. ನಾನು ಭಿಕ್ಷಾಟನೆ ಮಾಡಿದವಳು, ಸೂಳೆಗಾರಿಕೆ ಮಾಡಿದವಳು. ಈ ತುಂಬಿದ ಸಭೆಯಲ್ಲಿ ನಮ್ಮ ಸಮುದಾಯದ ಗೋಷ್ಠಿಗಳಿಗೆ ಅವಕಾಶ ಕೊಟ್ಟಿದ್ದೀರಿ. ಅದಕ್ಕಾಗಿ ಧನ್ಯವಾದಗಳು” ಎಂದು ಹೇಳಿದರು.
“ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದೊಂದು ದೊಡ್ಡ ಸಮಸ್ಯೆಯಾಗಿದೆ. ಅಭಿಪ್ರಾಯ ಮುಕ್ತವಾಗಿ ಹಂಚಿಕೊಂಡ ಸುಧಾ ಭಾರಧ್ವಾಜ್, ತೀಸ್ತಾ ಸೆಟಲ್ವಾಡ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮೂಲಭೂತವಾದಿಗಳು ಗೌರಿ ಲಂಕೇಶ್ ಅವರ ಕೊಲೆ ಮಾಡಿರುವುದಕ್ಕೂ ನಾವು ಸಾಕ್ಷಿಯಾಗಿದ್ದೇವೆ” ಎಂದರು.
“ಆರೆಸ್ಸಸ್ನವರು ದೇಶ ರಕ್ಷಿಸಲು ಬಂದಿಲ್ಲ, ಸರ್ವಕಾಶ ಮಾಡಲು ಬಂದಿದ್ದಾರೆ. ಇದಕ್ಕೆ ಯಾರು ಜವಾಬ್ದಾರರು. ಈ ದೇಶದಲ್ಲಿ ನಮ್ಮ ಅಭಿಪ್ರಾಯ ಮಂಡಿಸುವುದೇ ದೊಡ್ಡ ಸವಾಲಾಗಿದೆ. ನಾವು ಬದಲಾವಣೆ ತರಬೇಕಾದರೆ ಮೊದಲು ಬಹುಪಾಲನ್ನು ಪಡೆಯಬೇಕು. ಬಳಿಕವಷ್ಟೇ ನಾವು ಮುಂದಿನ ಕೆಲಸ ಮಾಡಲು ಸಾಧ್ಯ. ಇಲ್ಲದಿದ್ದರೆ ಅವರ ‘ಮೆಜಾರಿಟಿ’ ಯಾವ ಕೆಲಸವನ್ನೂ ಮಾಡಲು ಬಿಡುವುದಿಲ್ಲ” ಎಂದು ಹೇಳಿದರು.
“ನಮ್ಮ ವಿರುದ್ಧ ಕಟ್ಟಿರುವ ಎಲ್ಲ ಹಣೆಪಟ್ಟಿಗೆ ದಿಕ್ಕಾರ ಕೂಗುತ್ತೇನೆ. ಇಂತಹ ಸವಾಲುಗಳು ಎದುರಾದಾಗ ಎಲ್ಲರೂ ಪ್ರತಿರೋಧಿಸೋಣ. ಇಂತಹ ಸಮಾವೇಶಗಳು ಇನ್ನೂ ನಡೆಯಲಿ” ಎಂದು ಹೇಳಿದರು.