✍️ ಡ್ಯಾನಿಯಲ್ ಸುಕುಮಾರ್
ಅನುವಾದ: ಹರೀಶ್ ಗಂಗಾಧರ್
ನಾನು ಹಾಡಿದ ಹಾಡನ್ನೇ ಹಾಡುತ್ತಿರಬಹುದು
ಆದರೆ ಆ ಹಾಡನ್ನೇ ಜೀವವಿರುವವರೆಗೆ ಹಾಡುವೆ
ನನ್ನ ಒಡಲ ಬಗೆದು ಕರುಳ ತೆಗೆದು
ವೀಣೆಯ ತಂತಿ ಮಾಡಿ ಬೀದಿ ಬೀದಿಗಳಲಿ ಪ್ರತಿಧ್ವನಿಸುವಂತೆ ಮೀಟುವೆ.
ಸತ್ಯ ಕೇಳುವ ಕಿವಿಗಳಿಗಾಗಿ
ನಾ ಹುಡುಕುತಲಿರುವೆ.
“ಅದೇ ಜಾತಿ, ದಬ್ಬಾಳಿಕೆ, ಕ್ರೌರ್ಯ, ಹಿಂಸೆ, ತಾರತಮ್ಯದ ಬಗ್ಗೆ ಎಷ್ಟು ಮಾತನಾಡುತ್ತೀಯ” ಅಂತ ಜನ ಕೇಳಿದಾಗ ಒಮ್ಮೊಮ್ಮೆ ನನಗೂ ಅನ್ನಿಸುತ್ತೆ ಇನ್ಮುಂದೆ ಬರೆಯಬಾರದು ಅಂತ, ಚರ್ಚೆ ಮಾಡಬಾರದು ಅಂತ. ನನಗೂ ಅನ್ನಿಸಿಬಿಡುತ್ತೆ ಹೇಳಿದ್ದನ್ನೇ ಎಷ್ಟು ಬಾರಿ ಹೇಳೋದು ಅಂತ, ಅದೇ ವಿಚಾರವಾಗಿ ಎಷ್ಟು ದೂರುವುದು ಅಂತ.
ಆಮೇಲೆ ಅರಿವು ಮೂಡುತ್ತೆ ಅವರು ನನ್ನ ದನಿಯನ್ನ ಅದುಮಿಡಲು ಪ್ರಯತ್ನಿಸುತ್ತಿದ್ದಾರೆ ಎಂದು. ಅನಾದಿ ಕಾಲದಿಂದಲೂ ಸಿಕ್ಕಿದ ಸವಲತ್ತುಗಳಿಂದ ಕುರುಡರಾದವರ ರಕ್ಷಣಾ ಗುಳ್ಳೆಯನ್ನ ನನ್ನ ದನಿ ಹೊಡೆದುಬಿಡುತ್ತದೆ ಎಂದು….
ಯಾರು ಏನೆಂದರೂ ಮಾತನಾಡುತ್ತಲೇ ಇರುತ್ತೇನೆ… ಅದೇ ಹಾಡನ್ನ ಮತ್ತೆ ಮತ್ತೆ ಹಾಡುತ್ತೇನೆ… ಸತ್ಯ, ಕೇಳುಗರ ಕಿವಿಗಳಿಗೆ ತಲುಪುವವರೆಗೆ…