ಮನುಷ್ಯ ದೈಹಿಕ ಆರೋಗ್ಯಕ್ಕೆ ನೀಡುವ ಆದ್ಯತೆಯನ್ನು ಮಾನಸಿಕ ಆರೋಗ್ಯಕ್ಕೇ ನೀಡುತ್ತಿಲ್ಲ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಬಹುದೆಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಮಹದೇವಪ್ಪ ಎಚ್ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಶಟ್ಟಹಳ್ಳಿಯ ಎ ಹೆಚ್ ಪಿ ಅಪಾರೆಲ್. ಫ್ರೈವೆಟ್ ಲಿಮಿಟೆಡ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಶ್ರೀರಂಗಪಟ್ಟಣ, ವಕೀಲರ ಸಂಘ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಕೆ ಶಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು, ಮಾನಸಿಕ ಅಸ್ವಸ್ಥರನ್ನು ಕೀಳಾಗಿ ಕಾಣಬೇಡಿ ಅವರು ಎಲ್ಲರಂತೆ ಮನುಷ್ಯರು, ಅವರನ್ನು ಗೌರವಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.
ಕೆ ಶೆಟ್ಟಹಳ್ಳಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಉಷಾ ಮಾತನಾಡಿ, ಜೀವನ ಶೈಲಿಯ ಬದಲಾವಣೆ ಹಾಗೂ ಯೋಗ ಧ್ಯಾನದಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಎಲ್ಲಾ ಮಾನಸಿಕ ಆರೋಗ್ಯ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಲಭ್ಯವಿದೆ, ಸಾಮಾಜಿಕ ಕಳಂಕವನ್ನು ದೂರಸರಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ಉಚಿತ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಸಲಹೆ ಪಡೆಯಬಹುದಾಗಿದೆ ಎಂದರು .
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್ ಕೆ ವೆಂಕಟೇಶ್ ಮಾತನಾಡಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಸ್ಯದ ಮನೋಭಾವನೆ ಬೆಳೆಸಿಕೊಂಡು ಉದ್ವೇಗಕ್ಕೆ ಒಳಗಾಗದಿರುವುದು ಒತ್ತಡ ನಿವಾರಣೆ ಕುರಿತಂತೆ ಅನೇಕ ಸಲಹೆಗಳನ್ನು ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಸತ್ಯ ನಾರಾಯಣ, ಕಾರ್ಯದರ್ಶಿ ಡಿ ಚಂದ್ರೇಗೌಡ, ಗಾರ್ಮೆಂಟ್ಸ್ ಫ್ಯಾಕ್ಟರಿಯ ಸೀನಿಯರ್ ಜನರಲ್ ಮ್ಯಾನೇಜರ್ ಸಾಜು ಪಿ ಸಿ, ವಕೀಲರ ಸಂಘದ ಖಜಾಂಚಿ ವಿನಯ್ ಕೆ ಎಂ, ಜಂಟಿ ಕಾರ್ಯದರ್ಶಿ ಡಿ ಕೃಷ್ಣೆಗೌಡ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್, ಆರೋಗ್ಯ ನಿರೀಕ್ಷಣಾಧಿಕಾರಿ ಫಣೀಂದ್ರ, ಎಚ್ ಆರ್ ಶಿಲ್ಪಾ ಹಾಗೂ ಫ್ಯಾಕ್ಟರಿಯ ಕಾರ್ಮಿಕರು ಹಾಜರಿದ್ದರು.