ರೈತರು ಉತ್ಪಾದನೆ ಮಾಡುವ ಹಾಲಿಗೆ ಸೂಕ್ತ ದರ ನಿಗದಿಗೆ ಮಾಡಬೇಕೆಂದು ಆಗ್ರಹಿಸಿ ಕಿಸಾನ್ ಸಂಘದ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ, ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ನೇತೃತ್ವದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಪ್ರಸ್ತುತ ಲೀಟರ್ ಹಾಲಿಗೆ ಕೇವಲ 27 ರೂ.ಗಳನ್ನು ನೀಡಲಾಗುತ್ತಿದೆ. ಈಗ ರೈತರು ಹಾಲು ಉತ್ಪಾದನೆ ಮಾಡಲು ಮಾಡುತ್ತಿರುವ ವೆಚ್ಚಗಿಂತ ಅತ್ಯಂತ ಕಡಿಮೆಯಾಗಿರುವುದರಿಂದ ರೈತರು ನಷ್ಟದಲ್ಲಿ ಯೇ ಹೈನುಗಾರಿಗೆ ನಡೆಸುತ್ತಿದ್ದಾರೆ ಎಂದು ದೂರಿದರು.
ಹಾಲಿನಿಂದ ಸುಮಾರು 50 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡಿ ಒಕ್ಕೂಟಗಳು ಲಾಭಗಳಿಸುತ್ತಿವೆ. ಆದರೆ ಇದರ ಲಾಭ ರೈತರಿಗೆ ದೊರೆಯುತ್ತಿಲ್ಲ ಎಂದರು.
2018ರ ರೈತರ ಸಾಲ ಮನ್ನಾ ಯೋಜನೆಯ ಪ್ರಕಾರ ಸಾವಿರಾರು ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಹರಿದ್ದರೂ, ಅವರಿಗೆ ಸಣ್ಣಪುಟ್ಟ ದಾಖಲಾತಿಗಳ ಲೋಪ ದೋಷಗಳಿಂದಾಗಿ ಸೌಲಭ್ಯ ನಿರಾಕರಿಸಲಾಗಿದ್ದು, ರೈತರು ಎಲ್ಲಾ ದಾಖಲಾತಿಗಳನ್ನು ನೀಡಿ ವರ್ಷಗಳೇ ಕಳೆದರೂ, ಅಂತಹ ರೈತರಿಗೆ ಕೂಡಲೇ ಸಾಲ ಮನ್ನಾ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ಉಪಾಧ್ಯಕ್ಷ ಪಿ.ಎಲ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪಣಕನಹಳ್ಳಿ ವೆಂಕಟೇಶ್, ಮಂಡ್ಯ ಜಿಲ್ಲಾಧ್ಯಕ್ಷ ಯಲಿಯೂರು ಆನಂದ್ ಉಪಸ್ಥಿತರಿದ್ದರು.