ಕಲಬುರಗಿ ಜಿಲ್ಲೆಯ ಜೇವರ್ಗಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧೀಕ್ಷಕ ಧರ್ಮರಾಯ ಅವರ ವರ್ಗಾವಣೆ ಕುರಿತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಜೇವರ್ಗಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧೀಕ್ಷಕರಾಗಿ ಐದು ವರ್ಷಕ್ಕೂ ಅಧಿಕ ಕಾಲ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಿರುವ ಧರ್ಮರಾಯ ಬೈನೂರು ಅವರನ್ನು ದೂರುಗಳು ಇದ್ದ ಹಿನ್ನಲೆಯಲ್ಲಿ ಹಾಗೂ ವರ್ಗಾವಣೆ ನಿಯಮಾವಳಿಗಳ ಅನ್ವಯ 2023ರಲ್ಲಿ ಹುದ್ದೆಗಳು ಖಾಲಿ ಇದ್ದ ಕಾರಣ ಉಡುಪಿ ಜಿಲ್ಲೆಯ
ಕಾರ್ಕಳಕ್ಕೆ ವರ್ಗಾವಣೆ ಮಾಡಲಾಗಿತ್ತು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ಆ ನೌಕರ ವರ್ಗಾವಣೆ ಮಾಡಲಾದ ಸ್ಥಳಕ್ಕೆ ಹಾಜರಾಗದೇ, ಅದೇ ಸ್ಥಳದಲ್ಲಿ ಮುಂದುವರೆಯಲು ಹಾಗೂ ವಿಜಯಪುರ ಜಿಲ್ಲೆಗೆ ವರ್ಗಾವಣೆ ಹೊಂದಲು ಹಲವು ಬಾರಿ ಒತ್ತಡ ತಂದಿದ್ದರೂ ಅದಕ್ಕೆ ಮಣಿದಿರುವುದಿಲ್ಲ. ವರ್ಗಾವಣೆ ಸ್ಥಳಕ್ಕೆ ಹಾಜರಾಗದೇ ಕರ್ತವ್ಯ ಲೋಪ ಎಸಗಿದ್ದಲ್ಲದೇ ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಇನ್ನಿಲ್ಲದ ಒತ್ತಡ ತಂದರೂ ಸರ್ಕಾರ ಮಣಿಯದೇ ಇದ್ದಾಗ ಈ ರೀತಿಯ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸಿರುತ್ತಾರೆ ಎಂದು ಸಚಿವರು ತಿಳಿಸಿದ್ಧಾರೆ.
ನೌಕರ ತಾನೇ ನೀಡಿರುವ ಸ್ವಯಂ ಹೇಳಿಕೆಯಲ್ಲಿಯೂ ಸಹ ವೈಯಕ್ತಿಕ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿರುತ್ತಾರೆಯೇ ವಿನಃ ಬೇರೆ ಇನ್ಯಾವುದೇ ವಿಚಾರವೂ ಇರುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.