ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರು ಹೋಬಳಿಯ ಕಾಳಿಂಗನಹಳ್ಳಿ ಪಂಚಾಯಿತಿಯ ವಡೇರಹಳ್ಳಿ ಗ್ರಾಮದ ರೈತಾಪಿ ಕುಟುಂಬದ ಮಂಜುಳಾ ಮತ್ತು ಮಂಜುನಾಥ ಅವರ ಮಗಳು ಜಾನವಿ ಅವರು 2024ರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಪ್ರತಿಶತ 600 ಕ್ಕೆ 597 ಅಂಕಗಳನ್ನು ಗಳಿಸಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಾಧಕಿ ಜಾನವಿ ಅವರ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಜಾನವಿ ಅವರಿಗೆ ಸಿಹಿ ತಿನ್ನಿಸಿ, ಮುಂದೆಯೂ ಸಿಗುವ ಅವಕಾಶಗಳನ್ನು ಬಳಸಿಕೊಂಡು ಜ್ಞಾನ ಪಡೆದು, ಸಾಧನೆಯ ದಾರಿಯಲ್ಲಿ ಮುನ್ನಡೆದು, ಯಶಸ್ಸು ಹಾಗೂ ಕೀರ್ತಿ ಸಂಪಾದಿಸು ಎಂದು ಹಾರೈಸಿದರು. ಈ ಸಮಯದಲ್ಲಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.