ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಸರ್ಕಾರ ಬಂದು ಎಂಟು ತಿಂಗಳು ಕಳೆದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಹುದ್ದೆಗಳನ್ನು ಕೊಟ್ಟಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದ ಮಧ್ಯೆಯೇ ಕೊನೆಗೂ ನಿಗಮ, ಮಂಡಳಿ ಪಟ್ಟಿಯು ಬಿಡುಗಡೆಗೊಂಡಿದೆ.
ಈ ಪಟ್ಟಿಯಲ್ಲಿ ಒಟ್ಟು 36 ಶಾಸಕರಿಗೆ ಮಣೆ ಹಾಕಲಾಗಿದೆ. 36 ಶಾಸಕರನ್ನು ವಿವಿಧ ಮಂಡಳಿಗಳ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಸುತ್ತೋಲೆಯನ್ನು ಸಿಎಂ ಕಚೇರಿ ಜ.26ರ ಸಂಜೆ ಹೊರಡಿಸಿದೆ.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಶ್ರೀರಂಗಪಟ್ಟಣ ಶಾಸಕ ಎಂ.ಬಿ.ರಮೇಶ್ ಬಾಬು ಬಂಡೀಸಿದ್ಧೇಗೌಡ ಅವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ) ಅಧ್ಯಕ್ಷ ಸ್ಥಾನ ನೀಡಲಾಗಿದೆ.