ವರದಿ : ನ.ಲಿ.ಕೃಷ್ಣ
ಸರ್ವ ಜನಾಂಗದ ಏಳಿಗೆಗಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ಹಿರಿಮೆ ನಾಡಪ್ರಭು ಕೆಂಪೇಗೌಡ ಅವರದು
ಎಂದು ಮದ್ದೂರು ಶಾಸಕ ಕೆ ಎಂ ಉದಯ್ ಸ್ಮರಿಸಿದರು.
ಮದ್ದೂರು ತಾಲ್ಲೂಕು ಆಡಳಿತ ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 514 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಹಾಗೂ ಕುಡಿಯುವ ನೀರಿಗಾಗಿ ಹಲವಾರು ಕೆರೆಗಳನ್ನು, ವ್ಯಾಪಾರ ವಹಿವಾಟಿಗಾಗಿ ಹಲವು ಪೇಟೆಗಳನ್ನು, ನಾಡಿನ ಭದ್ರತೆಗಾಗಿ ಹಲವು ಕೋಟೆಗಳನ್ನು ನಿರ್ಮಿಸಿದ ಕೆಂಪೇಗೌಡರನ್ನು ಸ್ಮರಿಸುವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ವೇದಿಕೆಯಲ್ಲಿ ತಹಶಿಲ್ದಾರ್ ನರಸಿಂಹಮೂರ್ತಿ, ಇ ಓ ಸಂದೀಪ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಚಂದುಪುರ, ಪ್ರಗತಿಪರ ಸಂಘಟನೆಗಳ ಪ್ರಧಾನ ಕಾರ್ಯದರ್ಶಿ ವಿ ಸಿ ಉಮಾಶಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮದ್ದೂರು ಪಟ್ಟಣದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರವು ಜಾನಪದ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ಪೇಟೆ ಬೀದಿ ಮೂಲಕ ಕ್ರೀಡಾಂಗಣ ತಲುಪಿತು.
ಸಾಧಕರಿಗೆ ಸನ್ಮಾನ
ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಮದ್ದೂರು ತಾಲ್ಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳ ಸಾಧಕರಾದ ಆರ್ ಎಸ್ ಸೀತಾರಾಮ್ (ರೈತ ಚಳವಳಿಯಲ್ಲಿ ನಾಲ್ಕು ದಶಕಗಳ ಸೇವೆ), ಜಿ ಎನ್ ಸತ್ಯ (ವಕೀಲರು, ಸಂಘಟನೆ, ಸಮಾಜ ಸೇವೆ), ಪಿಡಿಓ ಅಶ್ವಿನಿ ಎಂ ಆರ್ (ಗ್ರಾಮ ಸ್ವರಾಜ್ಯಕ್ಕಾಗಿ ಉತ್ತಮ ಆಡಳಿತ), ಮಹೇಶ್ ಎಂ.ಪಿ (ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆ), ಶಿಕ್ಷಕ ಶಿವಕುಮಾರ್ ಕೆ ಟಿ (ಸಮಾಜಸೇವೆ – ಸಂಘಟನೆ), ವಳಗೆರೆಹಳ್ಳಿ ರಾಮಣ್ಣ (ತತ್ವಪದ ಗಾಯನ), ಅವಿನಾಶ್ ಎಸ್ ಎಮ್ (ಯುವಜನ ಸೇವೆ), ಬೂದುಗುಪ್ಪೆ ಶಿವಮಲ್ಲಪ್ಪ(ಸಾಹಿತ್ಯ, ಸಮಾಜಸೇವೆ, ಸಹಕಾರ) ಹಾಗೂ ಶಶಿಕುಮಾರ್ (ಸಮಾಜ ಸೇವೆ, ಹಿಂದುಳಿದ ವರ್ಗಗಳ ಸಂಘಟನೆ) ಇವರನ್ನು ಶಾಸಕ ಕೆ ಎಮ್ ಉದಯ್ ಅವರು ಸನ್ಮಾನಿಸಿದರು.