ಕಾಂಗ್ರೆಸ್ ಪಕ್ಷಕ್ಕೆ ಚಲುವರಾಯಸ್ವಾಮಿ ಅವರ ಕೊಡುಗೆ ಏನು? ಚಲುವರಾಯಸ್ವಾಮಿ ಅವರು ಜೆಡಿಎಸ್ ಹಾಳು ಮಾಡಿದ್ದಾಯ್ತು, ಈಗ ಕಾಂಗ್ರೆಸ್ ಹಾಳು ಮಾಡಲು ಬಂದಿದ್ದಾರೆಂದು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪಾಲಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷಕ್ಕೆ ಇವರ ಕೊಡುಗೆ ಏನೆಂದು ತಿಳಿಯುತ್ತಿಲ್ಲ. 2018 ರ ಚುನಾವಣೆಯಲ್ಲಿ ಪಕ್ಷ ಸೇರ್ಪಡೆ ಗೊಂಡಿರುವ ಈ ವ್ಯಕ್ತಿ ನಮ್ಮ ಪಕ್ಷದ ವರ್ಚಸ್ಸನ್ನೇ ಕೆಡಿಸುತ್ತಿದ್ದಾರೆ.ಎಲ್ಲಿಂದಲೋ ಬಂದ ಚಲುವರಾಯಸ್ವಾಮಿ ಹಾಗೂ ರಮೇಶ್ ಬಾಬು ಬಂಡಿಸಿದ್ದೇಗೌಡ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಚ್ 12 ರಂದು ಪ್ರಜಾಧ್ವನಿ ಯಾತ್ರೆ ನಡೆಯುತ್ತಿದ್ದು,ನಮ್ಮನ್ನು ಪರಿಗಣಿಸಿಲ್ಲ.ಅವರಿಷ್ಟದಂತೆ ಅರಕೆರೆ ಹೋಬಳಿಯಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ.ಕ್ಷೇತ್ರದ ಬೇರೆ ಭಾಗಗಳಲ್ಲಿ ಪ್ರಜಾ ಧ್ವನಿ ಯಾತ್ರೆ ಆಗದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದಾರಿ ತಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯ ಸಭೆಯಲ್ಲಿ ಮತ ಹಾಕಿದ್ದರಿಂದ ಚಲುವರಾಯಸ್ವಾಮಿ ಹಾಗೂ ರಮೇಶ್ಬಾಬು ಅವರನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳಿಸಿಕೊಂಡು ಟಿಕೆಟ್ ನೀಡಿತು.ಇದರಿಂದ ಜಿಲ್ಲೆಯಲ್ಲಿ ಏಳೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ನೆಲಕಚ್ಚಿತು. ಎಲ್ಲಿಂದಲೋ ಬಂದು ಪಕ್ಷ ಹಾಳು ಮಾಡಲು ನಿಂತಿರುವ ಇವರ ಮಾತಿಗೆ ಏಕೆ ಬೆಲೆ ಕೊಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ, ಆದರೆ ಇದನ್ನು ಹಾಳು ಮಾಡಲಾಗುತ್ತಿದೆ ಎಂದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಚಲುವರಾಯಸ್ವಾಮಿ ಕೊಡುಗೆ ಶೂನ್ಯ, ನಮ್ಮಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾದ ವಾತಾವರಣವಿದೆ. ಮೂಲ ಕಾಂಗ್ರೆಸಿಗರನ್ನು ರಮೇಶ್ ಬಂಡಿಸಿದ್ದೇಗೌಡ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪ್ರಚಾರಕ್ಕೆ ಹೋದಗಲೆಲ್ಲಾ ನನಗೆ ಟಿಕೆಟ್ ಸಿಕ್ಕಿದೆ ಎಂಬ ಭ್ರಮೆಯಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಬಂದು ತಪ್ಪು ಮಾಡಿಬಿಟ್ಟೆ ಇದೊಂದು ಸಾರಿ ನನ್ನನ್ನ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾ.12 ರಂದು ಶ್ರೀರಂಗಪಟ್ಟಣಕ್ಕೆ ಆಗಮಿಸಲಿರುವ ಪ್ರಜಾಧ್ವನಿ ಬಗ್ಗೆ ಸಭೆ ಕರೆದು ಅಭಿಪ್ರಾಯ ಕೇಳುತ್ತಿಲ್ಲ, ಅರಕೆರೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ರೋಡ್ ಶೋ ಮಾಡುತ್ತಿದ್ದಾರೆ, ಕೇವಲ ಅರಕೆರೆಗೆ ಮಾತ್ರ ಕಾಂಗ್ರೆಸ್ ಸೀಮಿತವಾಗಿಲ್ಲ ಎಂಬುದನ್ನು ರಮೇಶ್ ಬಾಬು ಬಂಡಿಸಿದ್ದೇಗೌಡ ಮನಗಾಣಬೇಕು. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಹೊಸಮುಖ ಬರಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈಗಲಾದರೂ ವರಿಷ್ಠರು ಎಚ್ಚೆತ್ತುಕೊಳ್ಳಲಿ, ಇಷ್ಟರಮೇಲೂ ನಿರ್ಲಕ್ಷಿಸಿದರೆ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಹೊರಗುಳಿದು ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತನಾಗಿ ಕಳೆದ 30 ವರ್ಷಗಳಿಂದಲೂ ಸಹ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೆ, ಬಹಳ ಒತ್ತಾಯ ಮಾಡಿದ ಬಾಬು ಬಂಡಿಸಿದ್ದೇಗೌಡ ಸೇರಿದಂತೆ ನಾಯಕರ ಮಾತು ಕೇಳಿ, ಜೊತೆಗೆ ಕಾರ್ಯಕರ್ತರ ಸಭೆಯಲ್ಲಿ ಚರ್ಚೆ ನಡೆಸಿ ವಾಪಸ್ ಪಡೆದುಕೊಂಡೆ.ಆದರೆ ಈ ಬಾರಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಭಿಮಾನಿಗಳು, ಹಿತೈಷಿಗಳು ತಿಳಿಸಿದ್ದು,ಪಕ್ಷ ಟಿಕೆಟ್ ನೀಡದಿದ್ದರೆ ಅಭಿಮಾನಿಗಳು ಹಾಗೂ ಬೆಂಬಲಿಗರ ನಿರ್ಧಾರದಂತೆ ನಡೆದುಕೊಳ್ಳುವೆ ಎಂದರು.
ಮುಖಂಡರಾದ ಮರಳಗಾಲ ವಿಜಯ್ಕುಮಾರ್, ಸಿದ್ದಲಿಂಗೇಗೌಡ, ನಗುನಹಳ್ಳಿ ಬಾಲಕೃಷ್ಣ, ದರಸಗುಪ್ಪೆ ಗೋಪಾಲ್, ಕಾರಸವಾಡಿ ರಮೇಶ್, ಸಂತೋಷ್ ಇದ್ದರು.