ಸಹಕಾರ ಸಂಘಗಳ ಪಾತ್ರ ಬಹಳ ಮುಖ್ಯ. ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಸಮಾಜದ ಏಳಿಗೆ ಆಗುತ್ತದೆ ಎಂದು ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ ಪಿ ಕೃಷ್ಣಕುಮಾರ್ ಹೇಳಿದರು.
ಮಂಡ್ಯ ನಗರದ ಗಾಂಧಿನಗರ ಬಡಾವಣೆಯ ಶ್ರೀಗಂಗಾ ಪರಮೇಶ್ವರಿ ಪತ್ತಿನ ಸಹಕಾರ ಸಂಘದಿಂದ ಅಯೋಜಿಸಿದ್ದ ಗುರುತಿನ ಚೀಟಿ ವಿತರಣೆ ಹಾಗೂ ಎಂ.ಪಿ.ಕೃಷ್ಣಕುಮಾರ್ ಅವರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಲಾಭದಾಯಕವಾಗಿ ನಡೆದರೆ ಮಾತ್ರ ಸಹಕಾರ ಸಂಘಗಳಿಗೆ ಒಂದು ಮೌಲ್ಯ ಬರುತ್ತದೆ, ಹಾಗಾಗಿ ಪ್ರತಿಯೊಬ್ಬರೂ ಸಹಕಾರ ಸಂಘವು ಉತ್ತಮವಾಗಿ ನಡೆದು ಕೊಂಡು ಹೋಗಲು ಸಹಕಾರ ನೀಡಬೇಕು ಎಂದು ಹೇಳಿದರು.
ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಉತ್ತಮವಾದ ವಿವಿಧ ಸೇವೆಗಳನ್ನು ಒದಗಿಸಿದಲ್ಲಿ ಸಂಘವು ಬೆಳೆಯುತ್ತದೆ. ಸರಕಾರದಿಂದ ನ್ಯಾಯಬೆಲೆ ಅಂಗಡಿಗಳು ಸ್ಥಾಪನೆ ಆಗಬೇಕಾದಲ್ಲಿ ಮೊದಲಿಗೆ ಸಹಕಾರ ಸಂಘಗಳಿಗೆ ಆದ್ಯತೆ ನೀಡುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಸರಕಾರವೇ ಸಹಕಾರ ಸಂಘಗಳಿಗೆ ನ್ಯಾಯಬೆಲೆ ಅಂಗಡಿನ ನಡೆಸಲು ಅನುಮತಿ ನೀಡುತ್ತದೆ, ಇದರಿಂದ ಸಹಕಾರ ಸಂಘಗಳಿಗೆ ಆರ್ಥಿಕವಾಗಿ ಬಲ ಬರಲಿದೆ. ಹಾಗಾಗಿ ಸಹಕಾರ ಸಂಘಗಳ ಪ್ರತಿಯೊಬ್ಬರು ಸಹಕಾರ ಸಂಘವನ್ನು ಉಳಿಸಿ ಬೆಳೆಸುವಂತಹ ಮಾರ್ಗದಲ್ಲಿ ಸಾಗಬೇಕು. ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಸೂನಗಹಳ್ಳಿ ಪುಟ್ಟಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಂ ಪಿ ಕೃಷ್ಣಕುಮಾರ್ ರವರು ಉತ್ತಮ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ನಮ್ಮ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನವರಾಗಿದು ಇದು ನಮಗೊಂದು ಹೆಮ್ಮೆ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಸಂಘಗಳ ನೌಕರರ ಸಂಘದ ಉಪಾಧ್ಯಕ್ಷ ಕೆ ಬಿ ಕೃಷ್ಣ, ಸಂಘದ ಗೌರವಾಧ್ಯಕ್ಷ ಎಂ ಸಿ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ರಾಮಕೃಷ್ಣ ಹಾಜರಿದ್ದರು.