ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಬಿ.ವಿ.ರವಿ (30)ಎಂಬ ಯುವಕನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದ ಆರೋಪಿಯನ್ನು ಕೃಷ್ಣರಾಜಸಾಗರ ಠಾಣೆಯ ಪೋಲಿಸರು ಮೈಸೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ.
ಬೆಳಗೊಳ ಗ್ರಾಮದ ಸವಿತಾ ವೈನ್ ಸ್ಟೋರ್ ಮುಂದೆ ನಿಂತಿದ್ದ ರವಿಯನ್ನು ಜುಲೈ 27 ರಂದು ರಾತ್ರಿ 8.45 ರ ಸಮಯದಲ್ಲಿ ಬೆಳಗೊಳ ಗ್ರಾಮದ ಶರತ್ ಎಂಬಾತ ಹಿಂದಿನಿಂದ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಇವರಿಬ್ಬರೂ ಸ್ನೇಹಿತರಾಗಿದ್ದು ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಆರೋಪಿ ಪೋಲಿಸರ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ.
ಆರೋಪಿಯ ಪತ್ತೆಗೆ ಎಸ್ಪಿ ಯತೀಶ್ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಡಿ.ಯೋಗೇಶ್ ಮತ್ತು ತಂಡ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.