Thursday, September 19, 2024

ಪ್ರಾಯೋಗಿಕ ಆವೃತ್ತಿ

ಆಂಧ್ರದಲ್ಲಿ ಮುಸ್ಲಿಂ ಮೀಸಲಾತಿ ರದ್ದಾಗಿದೆಯೇ? : ಬೊಮ್ಮಾಯಿ ಸರ್ಕಾರ ಹೇಳುತ್ತಿರುವ ಮತ್ತೊಂದು ಮಹಾ ಸುಳ್ಳು!

✍️ ಶಿವಸುಂದರ್ ಪ್ರಗತಿಪರ ಚಿಂತಕರು

ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ರದ್ದಿನ ವಿಷಯದಲ್ಲಿ ಬೊಮ್ಮಾಯಿ ಸರ್ಕಾರ ಹೇಳುತ್ತಿರುವ ಮತ್ತೊಂದು ಮಹಾ ಸುಳ್ಳು!

ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಮೀಸಲಾತಿಯ ಭಾಗವಾಗಿ 2 (ಬಿ ) ಪ್ರವರ್ಗದಡಿ ನೀಡಿದ್ದ ಶೇ. 4 ಮೀಸಲಾತಿಯನ್ನು ರದ್ದು ಮಾಡಿದ್ದಕ್ಕೆ ಬೊಮ್ಮಾಯಿ ಸರ್ಕಾರ ನೀಡಿರುವ ಕಾರಣ ಅರ್ಧ ಸತ್ಯ ಮಾತ್ರವಲ್ಲ ಮಹಾಸುಳ್ಳಿನಿಂದಲೂ ಕೂಡಿದೆ.

” ಆಂಧ್ರದಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಕೊಟ್ಟ ಮೀಸಲಾತಿಯನ್ನು ಆಂಧ್ರದ ಹೈಕೋರ್ಟು ರದ್ದು ಮಾಡಿದೆ . ಆದ್ದರಿಂದ ನಾವು ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ರದ್ದು ಮಾಡಿದ್ದೇವೆ”

ಎಂದು ಬಿಜೆಪಿ ಸರ್ಕಾರ ಸಬೂಬು ನೀಡುತ್ತಿದೆಯಷ್ಟೆ.

ಕರ್ನಾಟದಲ್ಲಿ ಮುಸ್ಲಿಮರಿಗೆ ಕೊಡುತ್ತಿದ್ದ ಮೀಸಲಾತಿ ಧರ್ಮದ ಆಧಾರದಲ್ಲಿ ಅಲ್ಲ. ಬದಲಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.

ಆದರೆ ಆಂಧ್ರದಲ್ಲಿ ಮುಸ್ಲಿಮರ ಮೀಸಲಾತಿ ರದ್ದಾಗಿದೆಯೇ?

ಆಂಧ್ರದಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿತ್ತೇ ?

ಈ ಎರಡೂ ವಿಷಯಗಳ ಬಗ್ಗೆಯೂ ಬೊಮ್ಮಾಯಿ ಸರ್ಕಾರ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದೆ ..

2004ರಲ್ಲಿ ಆಂಧ್ರ ಸರ್ಕಾರ ಮುಸ್ಲಿಮರಿಗೆ ಧರ್ಮಾದ ಆಧಾರಲ್ಲಿ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿತ್ತು.

ಅದನ್ನು ( ಟಿ. ಮುರಳೀಧರ ರಾವ್ ವರ್ಸಸ್ ಆಂಧ್ರ ಸರ್ಕಾರ ಪ್ರಕರಣದಲ್ಲಿ ) ಹೈಕೋರ್ಟು ರದ್ದು ಮಾಡಿತ್ತು.

ಆದರೆ ಅದಕ್ಕೆ ಕಾರಣ :

ಅ )ಈ ಆದೇಶವನ್ನು ಮಾಡುವಾಗ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯ ಪಡೆದಿಲ್ಲ ಮತ್ತು

ಆ ) ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 50 ರ ಮೇಲ್ಮಿತಿಯನ್ನು ಮೀರುತ್ತದೆ ಎಂಬ ಕಾರಣಕ್ಕೆ .. ಹೊರತು ಧಾರ್ಮಿಕ ಆಧಾರದ ಮೀಸಲಾತಿ ಸಲ್ಲದು ಎಂಬ ಕಾರಣಕ್ಕಾಗಿ ಅಲ್ಲ.

ಆ ನಂತರ 2005 ರಲ್ಲಿ ಆಂಧ್ರ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಮೇರೆಗೆ ಕರ್ನಾಟಕದಂತೆ ಇಡೀ ಮುಸ್ಲಿಮರನ್ನು ಹಿಂದುಳಿದ ವರ್ಗಗಳಾಗಿ ಪರಿಗಣಿಸಿ ಒಬಿಸಿ ಮೀಸಲಾತಿಯ ಭಾಗವಾಗಿ ಮತ್ತು ಅದರೊಳಗೆ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸಿತು. ಅದನ್ನೂ ಕೂಡ ಆಂಧ್ರಪ್ರದೇಶ ಹೈಕೋರ್ಟು ( ಅರ್ಚನಾ ರೆಡ್ಡಿ ವರ್ಸಸ್ ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ ) ರದ್ದು ಮಾಡಿತು.

ಆಗಲೂ ಅದಕ್ಕೆ ಕಾರಣವಾದದ್ದು ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿದ್ದಾರೆ ಎಂಬುದಲ್ಲ

ಬದಲಿಗೆ ಇಡೀ ಮುಸ್ಲಿಂ ಸಮುದಾಯ ಹಿಂದುಳಿದ ವರ್ಗ ಎಂದು ಸರಿಯಾಗಿ ಸಾಬೀತಾಗಿಲ್ಲ ಎಂಬ ಕಾರಣಕ್ಕೆ

– ನಂತರ ಆಂಧ್ರ ಸರ್ಕಾರ ಮುಸ್ಲಿಂ ರ ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಶಿಫಾರಸ್ಸು ಮಾಡಲು ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಹಿರಿಯ ಹಾಗೂ ಮೇಧಾವಿ ಸಾಮಾಜಿಕ ನ್ಯಾಯನೀತಿಜ್ಞ ಪಿ.ಎಸ . ಕೃಷ್ಣನ್ ಅವರ ಸಮಿತಿಯನ್ನು ನೇಮಿಸಿತು.

ಆ ಸಮಿತಿಯು ವಿಸ್ತೃತ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಿ ಮುಸ್ಲಿಮರಲ್ಲಿನ 14 ಪ್ರಮುಖ ಪ್ರವರ್ಗಗಳನ್ನು ಹಿಂದುಳಿದ ವರ್ಗಗಳಾನ್ನಾಗಿ ಪರಿಗಣಿಸಿ ಒಬಿಸಿ ಮೀಸಲಾತಿ ಸಮುದಾಯದೊಳಗೆ ವಿಶೇಷ ಪ್ರವರ್ಗ ‘E” ಕಲ್ಪಿಸಿ ಶೇ. 4 ರಷ್ಟು ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು.

ಅದನ್ನು ಹಿಂದುಳಿದ ವರ್ಗದ ಆಯೋಗವೂ ಅನುಮೋದಿಸಿತು.

ಇದನ್ನು ಆಂಧ್ರದ ಶಾಸನ ಸಭೆ ಹೆಚ್ಚೂ ಕಡಿಮೆ ಸರ್ವಸಮ್ಮತಿಯಿಂದ ಅನುಮೋದಿಸಿ ಕಾಯಿದೆ ಮಾಡಿತು.

ಈ ಕಾಯಿದೆಯನ್ನು ಹಲವಾರು ಆಂಧ್ರ ಹೈಕೋರ್ಟಿನಲ್ಲಿ ಪ್ರಶ್ನಿಸಿದರು . 2010ರ ಫೆಬ್ರವರಿಯಲ್ಲಿ ಹೈದರಾಬಾದ್ ಹೈಕೋರ್ಟಿನ ಪೂರ್ಣ ಪೀಠ 5-2 ಬಹುಮತದ ಮೇಲೆ ಈ ಆದೇಶವನ್ನು ರದ್ದು ಮಾಡಿತ್ತು.

ಅದಕ್ಕೆ ಹೈಕೋರ್ಟು ನೀಡಿದ ಕಾರಣ:

1) ಸರ್ಕಾರ ಕೆಲವು ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ವೆಂಬುದು

ಮತ್ತು

2) ಮುಸ್ಲಿಮರಿಗೆ ಕೊಡುವ ಮೀಸಲಾತಿಯಿಂದ ಮತಾಂತರ ಹೆಚ್ಚಬಹುದು ಎಂಬ ಆತಂಕ

ಆದರೆ ಹೈಕೋರ್ಟಿನ ಈ ಆದೇಶಕ್ಕೆ 2010 ರ ಮಾರ್ಚ್ 25 ರಂದೇ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತಡೆಯಾಜ್ಞೆ ನೀಡಿತು.

ಅಷ್ಟು ಮಾತ್ರವಲ್ಲ, ಆಂಧ್ರ ಸರ್ಕಾರವು 14 ಮುಸ್ಲಿಮ ಪ್ರವರ್ಗಗಳಿಗೆ ಸಮುದಾಯಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮುಂದುವರೆಸಲು ಆದೇಶ ನೀಡಿತು

ಹಾಗೂ

 ಈ ವಿಷಯದಲ್ಲಿ ಹಲವಾರು ಸಾಂವಿಧಾನಿಕ ಅಂಶಗಳಿರುವುದರಿಂದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತು.

EWS ಮೀಸಲಾತಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸಾಂವಿಧಾನಿಕ ಪೀಠ ಕ್ಕೆ ಮುಸ್ಲಿಂ ಮೀಸಲಾತಿಯ ಪ್ರಕರಣವನ್ನು ವರ್ಗಾಯಿಸಲಾಯಿತು.

ಈ ಸಾಂವಿಧಾನಿಕ ಪೀಠವು ಮುಸ್ಲಿಂ ಮೀಸಲಾತಿಯ ವಿಷಯದ ಬಗ್ಗೆ ಕೊಟ್ಟ ಕೊನೆಯ ಬಾರಿಗೆ ಅಹವಾಲನ್ನು ಆಲಿಸಿದ್ದು 2022ರ ಸೆಪ್ಟೆಂಬರ್ 6 ರಂದು.

ಆಗಲೂ ಅದು ತ್ರಿಸದಸ್ಯ ಪೀಠದ ಆದೇಶವನ್ನು ಅರ್ಥಾತ್ ಮುಸ್ಲಿಮರಿಗೆ ಕೊಡುತ್ತಿದ್ದ ಮೀಸಲಾತಿಯನ್ನು ಮುಂದುವರೆಸುವ ಆದೇಶವನ್ನು ಚಾಲ್ತಿಯಲ್ಲಿಟ್ಟು ವಿಚಾರಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡಿದೆ.

ಆಸಕ್ತರು ಸುಪ್ರೀಂ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು :

https://main.sci.gov.in/jonew/bosir/orderpdfold/1080534.pdf

ಅಂದರೆ ಸಾರಾಂಶದಲ್ಲಿ :

ಆಂಧ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿರುವುದು ಹಿಂದುಳಿದ ವರ್ಗದ ಆಧಾರದಲ್ಲಿಯೇ ವಿನಾ ಧರ್ಮದ ಆಧಾರದಲ್ಲಲ್ಲ .

ಈ ವಿಷಯದ ಬಗ್ಗೆ ಆಂಧ್ರ ಹೈಕೋರ್ಟು ಕೊಟ್ಟ ವ್ಯತಿರಿಕ್ತ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಿರುವುದಲ್ಲದೆ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾ ಗಿ ನೀಡುತ್ತಿದ್ದ ಮೀಸಲಾತಿಯನ್ನು ಚಾಲ್ತಿಯಲ್ಲಿಟ್ಟಿದೆ.

ವಿಸ್ತೃತ ಸಾಂವಿಧಾನಿಕ ಪೀಠವೂ ಮೀಸಲಾತಿ ಮುಂದುವರಿಕೆಗೆ ತಡೆ ನೀಡಿಲ್ಲ.

ಹೀಗಾಗಿ ಮೀಸಲಾತಿಯನ್ನು ಕೋರ್ಟು ರದ್ದುಗೊಳಿಸಿದೆ ಎಂಬ ಬೊಮ್ಮಾಯಿ ಸರ್ಕಾರದ ವ್ಯಾಖ್ಯಾನ ಮತ್ತು ಆದೇಶಗಳು ಸುಪ್ರೀಂ ತೀರ್ಪಿನ ಅಪವ್ಯಖ್ಯಾನ ಮತ್ತು ಕೋರ್ಟು ನಿಂದನೆ ಯೂ ಆಗುತ್ತದೆ

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!