ಮಂಡ್ಯ ಜಿಲ್ಲೆಯಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿದ್ದು ಮಿಮ್ಸ್ ರಕ್ತನಿಧಿ ಕೇಂದ್ರವು ರಕ್ತದಾನಿಗಳ ನಿರೀಕ್ಷೆಯಲ್ಲಿದೆ, ಹಾಗಾಗಿ ಜಿಲ್ಲೆಯ ಆರೋಗ್ಯವಂತ ಜನರು ರಕ್ತದಾನ ಮಾಡುವ ಮೂಲಕ ನೊಂದವರ ನೆರವಿಗೆ ಧಾವಿಸಬೇಕೆಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ರಕ್ತದಾನಿ ಎಂ.ಸಿ.ಲಂಕೇಶ್ ಮಂಗಲ ಮನವಿ ಮಾಡಿದರು.
ಮಂಡ್ಯ ತಾಲೂಕಿನ ಮಂಗಲ ಗ್ರಾಮದ ಜೈ ಭೀಮ್ ಯುವಕರ ಸಂಘದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಜೈ ಭೀಮ್ ಯುವಕರ ಸಂಘ ಮತ್ತು ನೆಲದನಿ ಬಳಗ ಮಂಗಲ ಆಯೋಜಿಸಿದ್ದ ಸಂಚಾರಿ ರಕ್ತ ಸಂಗ್ರಹಣೆ ವಾಹನದ ಮೂಲಕ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್-19 ಲಾಕ್ಡೌನ್ನಿಂದ ಸಂಘ -ಸಂಸ್ಥೆಗಳು ನಡೆಸುತ್ತಿದ್ದ ರಕ್ತದಾನ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯದೆ ಇರುವುದರಿಂದ ಸದ್ಯ ಜಿಲ್ಲೆಯ ರಕ್ತನಿಧಿಗಳಲ್ಲಿ ರಕ್ತದ ಅಭಾವ ಉಂಟಾಗಿದೆ. ರೋಗಿಗಳು ಮತ್ತು ಪೋಷಕರು ರಕ್ತಕ್ಕಾಗಿ ಪರದಾಡುತ್ತಿರುವುದು ಕಂಡು ಬಂದಿದೆ. ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತದ ಸಂಗ್ರಹ, ಸ್ವಯಂಪ್ರೇರಿತ ರಕ್ತದಾನಿಗಳು, ಕ್ಯಾಂಪ್ ಮತ್ತು ವಿದ್ಯಾರ್ಥಿಗಳಿಂದ ಆಗುತ್ತಿತ್ತು. ಆದರೆ ಸದ್ಯ ರಕ್ತ ಸಂಗ್ರಹಣೆ ಶೇ. 60 ರಷ್ಟು ಕಡಿಮೆಯಾಗಿದೆ. ಆದ್ದರಿಂದ ಇದು ತುರ್ತು ಅವಶ್ಯಕ ಸರ್ಜರಿ ಹೊರತಾಗಿ ಇತರ ಸಣ್ಣ ಸರ್ಜರಿಗೆ ರಕ್ತದ ಅಭಾವವಾಗಿದೆ. ಯುವ ಜನತೆ ರಕ್ತದಾನ ಮಾಡಿ ಜೀವ ಉಳಿಸುವ ಮಾನವೀಯತೆ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಆಧುನಿಕ ಕಾಲಘಟ್ಟದಲ್ಲಿ ರಕ್ತನಿಧಿ ಕೇಂದ್ರಕ್ಕೆ ಸಂಚಾರಿ ರಕ್ತ ಸಂಗ್ರಹಿಸುವ ಮತ್ತು ಸಾಗಿಸುವ ವಾಹನವು ಲಭ್ಯವಾಗಿದೆ, ಮಂಗಲ ಗ್ರಾಮದಲ್ಲಿ ಪ್ರಥಮ ಬಾರಿಗೆ ವಾಹನದ ಒಳಗಡೆ 25ಕ್ಕೂ ಹೆಚ್ಚು ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.
ಇದೇ ಸಂದರ್ಭದಲ್ಲಿ ರಕ್ತದಾನ ಮಾಡಲು ಬಂದ ಯುವಕರ ಆರೋಗ್ಯ ತಪಾಸಣೆ ನಡೆಸಿ, ಸ್ಥಳದಲ್ಲೇ ರಕ್ತವನ್ನು ಸಂಗ್ರಹಿಸಿಕೊಂಡು ರಕ್ತ ವರ್ಗಿಕರಣ ಮಾಡಿ, ದಾನಿಗಳಿಗೆ ರಕ್ತದ ಗುಂಪಿನ ಹೆಸರನ್ನು ತಿಳಿಸಿ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಮಹದೇವಸ್ವಾಮಿ ಅವರು 25ನೇ ಬಾರಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ.ಆಯುಷಾ, ಸಿಬ್ಬಂದಿಗಳಾದ ಜ್ಞಾನೇಶ್, ಧನಂಜಯ್, ಗ್ರಾ.ಪಂ. ಸದಸ್ಯರಾದ ಕುಮಾರ್ಗೌಡ, ಮಹದೇವಸ್ವಾಮಿ, ಮಧು, ಶಿವಲಿಂಗ, ದೇವರಾಜು, ವಿಕಾಶ್, ಸನತ್ಕುಮಾರ್, ಮಲ್ಲೇಶ್, ಶಿವರಾಂ, ಕೀರ್ತಿಕುಮಾರ್, ಸುನೀಲ್, ಶಿಕ್ಷಕಿ ವರಲಕ್ಷ್ಮಿ ಮತ್ತಿತರರಿದ್ದರು.