✍️ಆನಂದಿ_ಕಲರ್_ಪದ್ಯಗಳು
ಚಿದಂಬರ ನರೇಂದ್ರ
ಗುಲಾಬಿ ಕೊಟ್ಟರೆ
ಹೂವ ಮುರಿದು ವಾಪಸ್ ಕೊಡುತ್ತಾಳೆ
ಮುಳ್ಳುಗಳ ಇಟ್ಟುಕೊಳ್ಳುತ್ತಾಳೆ.
ಹಣ್ಣುಗಳ ಆರಿಸಿ ಕೊಟ್ಟರೆ
ತಿರುಳನ್ನೆಲ್ಲ ಉಗಳಿ ಬೀಜ ನುಂಗುತ್ತಾಳೆ
ರುಚಿಯ ಇತಿಹಾಸ ಹೇಳುತ್ತಾಳೆ.
ಹಾಡೊಂದನ್ನ ಸಿಂಗರಿಸಿ ಕೊಟ್ಟರೆ
ಪದಗಳ ದೂರ ಸರಿಸಿ
ನಡುವಿನ ಖಾಲಿಯ ತಮಾಷೆ ಮಾಡುತ್ತಾಳೆ.
ತುಟಿ ಮೇಲೊಂದು ಮುತ್ತನಿಟ್ಟರೆ
ಕಣ್ಣುಗಳ ಹಿಗ್ಗಿಸುತ್ತಾಳೆ
ಹಲ್ಲುಗಳ ಕಚ್ಚಿ ಹಿಡಿಯುತ್ತಾಳೆ.
ಪುಟ್ಟ ಪಾದಗಳ ಮೇಲೆ ಬ್ರಹ್ಮಾಂಡ ಹೊತ್ತವಳು
ಹಣೆ ಮೇಲಿನ ನೆರಿಗೆಗಳ ಭಾರಕ್ಕೆ ನಡುಗಿ
ಕಕ್ಕಾವಿಕ್ಕಿಯಾಗುತ್ತಾಳೆ.
ರೇಡಿಯೋ ಮನುಷ್ಯನ ಬಾಯಿ ಮುಚ್ಚುತ್ತಾಳೆ
ಎದೆಗೆ ಒತ್ತಿಕೊಂಡು
ಕನ್ನಡಿಯ ಜೊತೆ ಮಾತಿಗಿಳಿಯುತ್ತಾಳೆ.
ದುಗುಡಗಳ ಚಪ್ಪರಿಸುತ್ತ
ಖುಷಿಯಿಂದ ಬಿದ್ದು ಬಿದ್ದು ನಗುತ್ತಾಳೆ
ಮೂಗು ಮುಚ್ಚಿಕೊಂಡು
ಪೆಪ್ಪರಮೆಂಟು ನುಂಗಿ ಬಿಕ್ಕುತ್ತಾಳೆ.
ಬಹಳ ಪ್ರೀತಿ ದೇವರಿಗೆ ಅವಳೆಂದರೆ,
ಅದೇ ಅವಳ ಸೊಕ್ಕು, ಸೌಜನ್ಯ.
ಮುದ್ದು ಮಾಡಿ
ಹಾಳು ಮಾಡಿದ್ದಾರೆ ಅವಳನ್ನ
ಆರಾಧಿಸುವವರಷ್ಟೇ ಅಲ್ಲ
ದ್ವೇಷ ಮಾಡುವವರು ಕೂಡ.