ಮೈಸೂರು ಮೂಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿರುವ 50:50 ಸಿಎಂ ಸಿದ್ದರಾಮಯ್ಯನವರ ರಾಜಿನಾಮೆಗೆ ಆಗ್ರಹಿಸಿ ಇಂದು ಕೆ.ಆರ್.ಎಸ್. ಪಕ್ಷವು ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಮೂಡಾ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಪ್ರತಿಭಟನೆ ನಡೆಸಿ ಪಾದಯಾತ್ರೆ ಮೂಲಕ ಮೂಡಾ ಕಚೇರಿಗೆ ತೆರಳಲೆಂದು ಗನ್ ಹೌಸ್ ಬಳಿ ಸೇರಿದ್ದವರನ್ನು ಸಕಾರಣ ನೀಡದೇ ಬಂಧಿಸಲಾಯಿತು. ಈ ವಿಚಾರ ತಿಳಿದ, ಮುತ್ತಿಗೆ ಹಾಕಲು ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಆಗಮಿಸಿದ್ಧ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರೈಲು ನಿಲ್ದಾಣದ ಬಳಿ ಸೇರಿ, ಅಲ್ಲಿಂದಲೇ ನೇರವಾಗಿ ಮೂಡಾಗೆ ಮುತ್ತಿಗೆ ಹಾಕಲು ಪಾದಯಾತ್ರೆ ಆರಂಭಿಸಿದರು.
ಘೋಷಣೆ ಕೂಗುತ್ತ 50:50 ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಹಾಗೂ ನ್ಯಾಯಾಂಗದ ಮೂಲಕ ತನಿಖೆ ಮಾಡಿಸಬೇಕೆಂದು ಆಗ್ರಹಿಸಿ ಹೊರಟಿತು. ಪಾದಯಾತ್ರೆಯನ್ನು ಮೂಡಾ ಕಚೇರಿಯ ಹತ್ತಿರದ ವೃತ್ತದಲ್ಲಿ ತಡೆದ ಪೊಲೀಸರು ಅಕ್ರಮ ಬಂಧನಕ್ಕೆ ಮುಂದಾದರು.
ಈ ಸಂದರ್ಭದಲ್ಲಿ ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಪೊಲೀಸರಲ್ಲಿ ಸಮರ್ಪಕ ಉತ್ತರ ಇರಲಿಲ್ಲ. ಸಂವಿಧಾನ ರಕ್ಷಿಸುತ್ತೇವೆ ಎಂದು ಹೋದಲೆಲ್ಲಾ ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಅದೇ ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆ ತಡೆಯಲು ಪೊಲೀಸರನ್ನು ಬಳಸಿಕೊಂಡಿದ್ದಾರೆ. ಇಂತಹ ಕ್ರಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ಅವರು ಭಾವಿಸಿದ್ದರೆ ಅದು ಅವರ ಮೂರ್ಖತನ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯನವರು 50:50 ಸಿಎಂ ಆಗಿದ್ದು, ಕೇವಲ ಮೂಡದಲ್ಲಿ ಅಕ್ರಮವಾಗಿ 50:50 ಸೈಟ್ ಪಡೆಯದೆ ವಿರೋಧ ಪಕ್ಷಗಳೊಂದಿಗೆ 50:50 ಅಡ್ಜಸ್ಟ್ ಮೆಂಟ್ ರಾಜಕೀಯ ಮಾಡುತ್ತಿದ್ದು ಅವರು ಸಾರ್ವಜನಿಕ ಜೀವನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್., ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ಕಾರ್ಯದರ್ಶಿಗಳಾದ ರಘು ಜಾಣಗೆರೆ, ರಘುಪತಿ ಭಟ್, ವಿಜಯರಾಘವ ಮರಾಠೆ, ಮಂಜುನಾಥ್ ಎಸ್., ಸೋಮಸುಂದರ್ ಕೆ. ಎಸ್., ರವಿಕುಮಾರ್ ಎಂ., ಅರುಣ ಕುಮಾರ ಹೆಚ್. ಎಂ, ರಮೇಶ್ ಗೌಡ ಜಿ.ಎಂ, ಮೈಸೂರು ಜಿಲ್ಲಾಧ್ಯಕ್ಷರಾದ ಸುಂದರ್ ಪ್ರೇಮ್ ಕುಮಾರ್ ಇತರರು ಭಾಗವಹಿಸಿದ್ದರು.