ಮಂಡ್ಯ ನಗರದ ಮೈಶುಗರ್ ಪ್ರೌಢಶಾಲೆಯ ಆವರಣದಲ್ಲಿ ಮೈಶುಗರ್ ಹೈಸ್ಕೂಲ್ ವೆಲ್ಫೇರ್ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಜರುಗಿತು.
ಸಂಘದ ಅಧ್ಯಕ್ಷ ಬಿ.ಟಿ.ಜಯರಾಮು ಮಾತನಾಡಿ, ನಮ್ಮ ಸಂಘವು ಮೂರನೇ ವರ್ಷಕ್ಕೆ ಕಾಲಿರಿಸಿದ್ದು, ಸಂಘದ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸಲು ಪ್ರಯತ್ನ ಮಾಡಿದ್ದೇವೆ. ಇದೀಗ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಶಾಲೆಯು ಅಭಿವೃದ್ಧಿಯಾಗಲು ಅಡಚಣೆಯಾಗಿದೆ. ಮುಂದಿನ ದಿವಸಗಳಲ್ಲಿ ಶಾಲೆಯು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಬಗೆಯ ಸಂಶಯವಿಲ್ಲ ಎಂದು ನುಡಿದರು.
ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಶಿವಕುಮಾರ್ ಮಾತನಾಡಿ, ಇದೀಗ ನಮ್ಮ ಶಾಲೆಯು 74 ವರ್ಷಗಳನ್ನು ಪೂರೈಸಿದ್ದು, ಮುಂದಿನ ವರ್ಷ 75ನೇ ವರ್ಷವನ್ನು ಆಚರಿಸುತ್ತಿದ್ದು, ಮೈಶುಗರ್ ಶಾಲೆಯು ಮಂಡ್ಯ ನಗರದಲ್ಲಿ ಒಂದು ಕಾಲದಲ್ಲಿ ಹೆಸರುವಾಸಿಯಾಗಿತ್ತು, ಆದರೆ ಇತ್ತೀಚಿನ ದಿವಸಗಳಲ್ಲಿ ಅಧೋಗತಿಗೆ ಇಳಿಯುತ್ತಿದೆ. ಇದೇ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಇಂಡುವಾಳು ಗ್ರಾಮದ ದಿ.ಹೊನ್ನಪ್ಪರವರನ್ನು ಸಂಘದ ಅಧ್ಯಕ್ಷರನ್ನಾಗಿ ಮಾಡಿ, ಈ ಸಂಘದ ಅಭಿವೃದ್ಧಿಗಾಗಿ ರೂಪುರೋಷೆಯನ್ನು ರಚಿಸಿ ಅವರ ಮಾರ್ಗದರ್ಶನದಂತೆ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದಾಗಿ ಹಾಗೂ ಎಂದಿನಂತೆ ಈ ಶಾಲೆಯ ಅಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳನ್ನು ಎಲ್ಲರನ್ನೂ ಕರೆದು ಅಭಿವೃದ್ಧಿ ಪಡಿಸಿ, ಮುಂದಿನ ವರ್ಷ ಅಮೃತ ಮಹೋತ್ಸವ ಆಚರಿಸಲಾಗುವುದು ಎಂದರು. ಹಿರಿಯ ವಿದ್ಯಾರ್ಥಿಗಳು ಈ ಶಾಲೆಯ ಅಭಿವೃದ್ಧಿಗಾಗಿ ಕೈ ಜೋಡಿಸುತ್ತಿರುವುದು ಸಂತೋಷಕರವಾದ ವಿಷಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇದೇ ಶಾಲೆಯಲ್ಲಿ ಓದಿದ ಆರು ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಶಿವಲಿಂಗಯ್ಯ, ಸಂಘದ ಖಜಾಂಜಿ ಸತ್ಯನಾರಾಯಣರಾವ್, ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಶಾಲೆಯ ಆಡಳಿತ ಅಧಿಕಾರಿ ಟಿ. ರಮೇಶ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಪ್ರಾಥಮಿಕ ಶಾಲಾ ವಿಭಾಗದ ಶಶಿಕಲಾ ಹಾಗೂ ಇಲಾಖೆಯ ಮುಖ್ಯಸ್ಥರಾದ ಶ್ರೀನಿಧಿ ಹಾಜರಿದ್ದರು.