ಸಮಾಜಕ್ಕಾಗಿ ದುಡಿದು ಸಾರ್ಥಕ ಜೀವನ ಕಳೆದ ಬಾಣಸವಾಡಿ ನಾಗಣ್ಣ ಸ್ಮರಣೆಗಾಗಿ ದತ್ತಿ ನಿಧಿ ಸ್ಥಾಪಿಸಿ ಮುಂಬರುವ ದಿನಗಳಲ್ಲಿ ಸಮಾಜಕ್ಕಾಗಿ ದುಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ ತಿಳಿಸಿದರು.
ಮಂಡ್ಯನಗರದ ರೈತಸಭಾಂಗಣದಲ್ಲಿ ಶುಕ್ರವಾರ ನಡೆದ ಬಾಣಸವಾಡಿ ನಾಗಣ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವವಹಿಸಿ ಪ್ರಸ್ತಾವಿಕ ಮಾತನಾಡಿದ ಅವರು, ನಾಗಣ್ಣ ವಿದ್ಯಾರ್ಥಿ ದಿಸೆಯಿಂದಲೇ ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಂಡು ನೊಂದವರ ಪರವಾಗಿ ಕೆಲಸ ಮಾಡಿದವರು. 2010 ಪ್ರಥಮ ಬಾರಿಗೆ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದ ನಂತರ ನಾಗಣ್ಣ, ಅಧಿಕಾರ ವಿಕೇಂದ್ರಿಕರಣದ ಹಾಗೂ ಗಾಂಧಿ ಕಲ್ಪನೆಗೆ ಗ್ರಾಮ ಸ್ವರಾಜ್ಯದ ಬಗ್ಗೆ ಒಲವುಗಳಿಸಿಕೊಂಡು, ರಾಜ್ಯದಾದ್ಯಂತ ಗ್ರಾಂ.ಪಂ. ಸದಸ್ಯರನ್ನು ಸಂಘಟಿಸಿ ಪಂಚಾಯತ್ ರಾಜ್ ಒಕ್ಕೂಟ ಸ್ಥಾಪಿಸಿ, ಅದರ ಅಧ್ಯಕ್ಷರಾದರು. ಆ ಮೂಲಕ ಗ್ರಾ.ಪಂ.ಸದಸ್ಯರಲ್ಲಿ ಜಾಗೃತಿ ಮೂಡಿಸಿ ಸಂಘಟನೆ ಮಾಡಿದರು ಎಂದರು.
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸೋತವರು ಅವರು ಸಮಾಜಸೇವೆಯನ್ನು ಬಿಡಲಿಲ್ಲ, ಸೋಲಿನ ನಂತರವು ಒಕ್ಕಲಿಗರ ಸಂಘದ ಎಲ್ಲಾ ಸದಸ್ಯರನ್ನು ಕರೆದು ಸನ್ಮಾನಿಸಿದರು. ಇದು ಅವರಿಗಿದ್ದ ಸಮಾಜದ ಬಗೆಗಿನ ಬದ್ಧತೆಯನ್ನು ತೋರಿಸುತ್ತದೆ ಎಂದು ಸ್ಮರಿಸಿದರು.
ವೇದಿಕೆಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದಸ್ವಾಮಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಂದನಾಥ ಸ್ವಾಮೀಜಿ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಉಪಸ್ಥಿತರಿದ್ದರು.