ನಾಗಮಂಗಲ ಕ್ಷೇತ್ರಕ್ಕೆ ಸಮರ್ಥ ಹಾಗೂ ದಿಟ್ಟ ಹೋರಾಟಗಾರನ ಅವಶ್ಯಕತೆ ಇದ್ದು, ಕ್ಷೇತ್ರಕ್ಕೆ ನನ್ನಂತಹ ವ್ಯಕ್ತಿಯ ಅಗತ್ಯವಿದೆ ಎಂದು ಮಾಜಿ ಸಂಸದರಾದ ಎಲ್. ಆರ್. ಶಿವರಾಮೇಗೌಡರು ತಿಳಿಸಿದರು.
ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಆಡಳಿತದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ.ಜನರಿಗಾಗಿ ಹಲವು ಯೋಜನೆಗಳನ್ನು ತಂದಿದ್ದೇನೆ. ರೈತರಿಗೆ ಸಿಗಬೇಕಾದ ಸವ ಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ.ಆದರೆ ಇಂದು ರೈತರಿಗೆ ಸಿಗಬೇಕಾದ ನ್ಯಾಯಯುತ ಸವಲತ್ತುಗಳು ಸಿಗುವುದು ದೂರದ ಬೆಟ್ಟವಾಗಿದೆ. ಇಂತಹ ಪರಿಸ್ಥಿತಿಯನ್ನು ಮನಗಂಡಿರುವ ಕ್ಷೇತ್ರದ ಜನತೆ ಈಗಲಾದರೂ ನನಗೆ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಯಾವುದೇ ಸರ್ಕಾರಿ ಕಚೇರಿಯಲ್ಲಿ ಬಡಜನರ ಕೆಲಸವಾಗಬೇಕಾದರೆ ಲಂಚ ನೀಡಬೇಕಿದೆ.ರೈತರ ಕೆಲಸ ಆಗುವುದೇ ಬಹಳ ದುಸ್ತರವಾಗಿದ್ದು, ಸಂಪೂರ್ಣವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ದಿಟ್ಟ ಆಡಳಿತ ನಡೆಸುವ ಸಮರ್ಥ ನಾಯಕನ ಅವಶ್ಯಕತೆ ಇರುವುದರಿಂದ,ನನ್ನಂತಹ ಸಾಮರ್ಥ್ಯ ಇರುವ ವ್ಯಕ್ತಿಗೆ ಈ ಬಾರಿ ಅವಕಾಶ ಕಲ್ಪಿಸುವ ಸಂದರ್ಭ ಸೃಷ್ಟಿಯಾಗಿದೆ ಎಂದರು.
ಬೆಂಗಳೂರಿನಲ್ಲಿರುವ ನಾಗಮಂಗಲ ನಿವಾಸಿಗಳು ಈಗಾಗಲೇ ಕ್ಷೇತ್ರದಲ್ಲಿರುವ ಇತರೆ ಪಕ್ಷಗಳ ನಾಯಕರ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೆ ಶೂನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಲ್ಲಿ ಸಭೆ ಆಯೋಜನೆ ಮಾಡಿ ಯಾವ ಪುರುಷಾರ್ಥಕ್ಕಾಗಿ ಮತ ಕೇಳುತ್ತಿದ್ದಾರೋ ಎಂಬುದನ್ನು ಅವರೇ ಕೇಳಿಕೊಳ್ಳಬೇಕಿದೆ ಎಂದರು.
ನಾನೂ ಕೂಡ ಶೀಘ್ರವಾಗಿ ಬೆಂಗಳೂರು ನಿವಾಸಿಗಳ ಸ್ವಾಭಿಮಾನಿ ಸಭೆ ಏರ್ಪಡಿಸುತ್ತಿದ್ದು, ಈ ಸಭೆಗೆ ನಾಗಮಂಗಲದ ನಿವಾಸಿಗಳು ಭಾಗವಹಿಸಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ. ಬಿದರಕೆರೆ ಮಂಜೇಗೌಡ, ಚೆನ್ನಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.