ನಾಗಮಂಗಲ ತಾಲೂಕಿಗೆ ನನ್ನ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸಾಕಷ್ಟು ನೀಡಿದ್ದೆ, ಅಂತಹ ಬದಲಾವಣೆಯ ಕಾಲ ಮತ್ತೆ ಕೂಡಿ ಬರಲಿದೆ, ಇದಕ್ಕೆ ತಾಲೂಕಿನ ಜನತೆ ಕೈಜೋಡಿಸಬೇಕೆಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾ.ಪಂ.ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನತೆ ನನ್ನನ್ನು ತಿರಸ್ಕರಿಸಿ, ಬೇರೆಯವರಿಗೆ ಅವಕಾಶ ನೀಡಿದ್ದರು. ಈಗ ಬದಲಾವಣೆಗೆ ಕಾಲ ಕೂಡಿ ಬಂದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಾಗಮಂಗಲಕ್ಕೆ ಅಭಿವೃದ್ಧಿ ಪರ ಯೋಜನೆಗಳಾದ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಮುಂತಾದ ಕೆಲಸಗಳನ್ನು ಮಾಡಿದರೂ ಜನತೆ ತಿರಸ್ಕರಿಸಿದ್ದು ಬೇಸರವಾಯಿತು, ತಾಲೂಕಿನ ಪ್ರಬುದ್ಧ ಜನತೆ ಈ ನಿರ್ಧಾರವನ್ನು ಬದಲಿಸಿ ಸಣ್ಣಪುಟ್ಟ ಲೋಪದೋಷಗಳಿದ್ದರೂ ಸರಿಪಡಿಸಿ ಪ್ರತಿಯೊಬ್ಬರು ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಚುನಾವಣೆ ಸಮೀಪ ಇರುವುದರಿಂದ ತಾಲೂಕಿನಲ್ಲಿ ಪ್ರವಾಸ ಮಾಡಬೇಕಾಗಿದ್ದು, ಈ ಸಂದರ್ಭದಲ್ಲಿ ಮತ್ತೊಮ್ಮೆ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡುವ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.
ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಮಾತನಾಡಿ, ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಅವಧಿಯಲ್ಲಿ ನಾಗಮಂಗಲ ತಾಲೂಕಿನಲ್ಲಿ ಅಭಿವೃದ್ಧಿ ಮಾಡಿ, ಅಭಿವೃದ್ಧಿ ಯೋಜನೆಗಳ ಹರಿಕಾರರಾಗಿ ತಾಲೂಕಿನ ಚಿತ್ರಣವನ್ನೇ ಬದಲಾಯಿಸಿದ್ದರು. ಮುಂದಿನ ದಿನಗಳಲ್ಲಿ ಅವರು ಮಂಡ್ಯ ಜಿಲ್ಲೆಯ ನಾಯಕರಾಗಿ ಬೆಳೆಯಲು ತಾಲೂಕಿನ ಜನತೆ ಬೆಂಬಲಿಸಬೇಕೆಂದು ಕೋರಿದರು.
ಸಮಾರಂಭದಲ್ಲಿ ಗ್ರಾ.ಪಂ.ಸದಸ್ಯರಾದ ರಮೇಶ್, ಮಹೇಶ್, ತಮ್ಮಣ್ಣ, ಪುರಸಭೆ ಸದಸ್ಯರಾದ ರಮೇಶ್ ಹಾಗೂ ಅರಕೆರೆ ರಮೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.